ದುರಂತಕ್ಕೆ ತಲುಪುವ ಮೊದಲು ಎಚ್ಚರವಾಗೋಣ

ಮಾರ್ಚ್ 23, 2010 ರ ವಾರ್ತಾಭಾರತಿಯಲ್ಲಿ ಪ್ರಕಟಿತ ಲೇಖನ)

[dropcap]ನ[/dropcap]ಮ್ಮ ಸಮಾಜದ ಮನೋಸ್ಥಿತಿಯ ಬಗೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಒಂದು ವಿಶ್ಲೇಷಣೆಯನ್ನು ನೀಡಿ ದ್ದಾರೆ; ‘ಹುಚ್ಚ್ಚು ಮನಸ್ಸಿನ ಹತ್ತು ಮುಖಗಳು’ ಎಂದು, ಅದನ್ನೇ ಒಂದು ಸಂಸ್ಕತ ಶ್ಲೋಕದ ಮೂಲಕ ಅವರು ಚಿತ್ರಿಸಿದ್ದಾರೆ. ‘ಮರ್ಕಟಸ್ಯ ಸುರಾಪಾನಂ ಮದ್ಯೇ ವಶ್ಚೀಕ ತಾಡನಂ, ತನ್ಮದ್ಯೆ ಭೂತ ಸಂಚಾರಂ, ಯದ್ವಾ ತದ್ವಾ ಭವಿಷ್ಯತೀ’ ಹೆಂಡ ಕುಡಿದ ಮಂಗನಿಗೆ ಚೇಳು ಕಡಿಯು ತ್ತದೆ. ಭೂತ ಸಂಚಾರ ಆಗುತ್ತದೆ. ಮತ್ತೆ ನಡೆಯುವುದು ಏನೇನೋ ಎಂದು ಅದರ ಅರ್ಥ. ಇದು ನಮ್ಮನ್ನು ಕಳೆದ 6 ದಶಕ ಗಳಿಂದ ಆಳುತ್ತಾ ಬಂದಿರುವವರ ಹುಚ್ಚು ಮನಸ್ಸಿನ 10ಮುಖಗಳುಳ್ಳ ಆಳ್ವಿಕೆಯ ಪರಿಣಾಮ.

ಅದನ್ನೇ ಕುವೆಂಪುರವರು ಇನ್ನೂ ತೀಕ್ಷ್ಣವಾಗಿ ಹೇಳುತ್ತಾರೆ. ‘ಕರಿಯರದೋ ಬಿಳಿಯರದೋ ಯಾರದ್ದಾದರೆ ಏನು? ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ! ವಿಜಯ ನಗರವೋ, ಮೊಗಲರಾಳ್ವಿಕೆಯೋ ಇಂಗ್ಲಿಷರೋ ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ! ಕತ್ತಿ ಪರದೇಶಿ ಯಾದರೆ ಮಾತ್ರ ನೋವೇ? ನಮ್ಮವರೇ ಹದ ಹಾಕಿ ತಿವಿದರದು ಹೂವೇ?’’ ಈ ಕವಿ ಹದಯದ ಮಾತುಗಳು ಸ್ವಲ್ಪ ಹಳೆಯವು. ಆಗ ಆಳುತ್ತಿದ್ದವರು ಬೇರೆ, ಅನಂತರ ಬಂದವರು ಬೇರೆ ಬೇರೆ. ಈಗ ಇರುವವರು ಸಂಪೂರ್ಣ ಬೇರೆ. ಇವರ ಆಡಳಿತದಲ್ಲಂತೂ ಜನ ನುಚ್ಚು ನೂರಾಗುತ್ತಿದ್ದಾರೆ.

‘‘ರವಿ ಕಾಣದುದಂ ಕವಿ ಕಾಣ್ಬಂಗಡ’’ ಎಂದು ನಮ್ಮ ನಂದಳಿಕೆಯವರು ಸುಮ್ಮನೆ ಪ್ರಶ್ನಿಸಿಲ್ಲ. ಅಂದಿನವರ ನಡೆ ನುಡಿ ಗುರು ತಿಸಿ ಇಂದಿನವರು ಎಲ್ಲಿಗೆ ತಲಪುತ್ತಾರೆ ಎನ್ನುವುದು ಕವಿಗಳು ಅಂದೇ ಗುರುತಿಸಿದ್ದರು. ಮುಂದೆ ಆಗುವ ಅನಾಹುತಗಳನ್ನು ನಾವು ಇಂದಿನ ವರು ತಡೆಗಟ್ಟಬೇಕು. ಗತಕಾಲದ ವೈಭವ ಪುರಾಣ ಹಾಗೂ ಶಾಸ್ತ್ರಗಳೆಂದು ಮನುವಿ ನಂಥವರು ಬರೆದಿಟ್ಟದ್ದನ್ನು ಇಂದು ಆಳುವ ವರು ಪುನರಾವರ್ತನೆ ಮಾಡಲು ಹೊರಟಿದ್ದಾರೆ.

ಅದು ದುರಂತಕ್ಕೆ ತಲುಪುವ ಮೊದಲೇ ನಮ್ಮ ಜನ, ನಮ್ಮ ದುಡಿಮೆಗಾರರು, ನಮ್ಮ ಚಿಂತಕರು ಎಚ್ಚರಗೊಂಡು ಅನಾಹುತವನ್ನು ತಪ್ಪಿಸುವುದಕ್ಕೆ ಸನ್ನದ್ಧರಾಗಬೇಕಾಗಿದೆ.66 ನೆಯ ಅ.ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ನಾಡೋಜ ಪ್ರಶಸ್ತಿ ವಿಜೇತೆ ಗೀತಾ ನಾಗಭೂಷಣ್ ಅವರಿಗಿಂತ ಮತ್ತು ಚೆನ್ನಾಗಿ ಪ್ರತಿಭಟನೆಯ ದ್ವನಿಯೊಂದಿಗೆ ನುಡಿದಿರುವ ಮಾತುಗಳಿಗೆ ನಾನೇನು ಹೆಚ್ಚು ಸೇರಿಸಬೇಕಿಲ್ಲ. ಇಂದಿನ ಆಡಳಿತಗಾರರು ಈಗ ಅನುಸರಿಸುತ್ತಿರುವ ದಾರಿಯಲ್ಲೇ ಈ ನಾಡನ್ನು ಆಳುವ ಅವಕಾಶ ಇನ್ನೂ ನೀಡಿದರೆ ನಮ್ಮನ್ನು ನಾವೇ ಎಂದೂ ಹಿಂದಿರುಗಲಾಗದ ದುರಂತಕ್ಕೆ ತಲುಪಿಸಿದಂತಾಗುತ್ತದೆ.

ಸಕಾಲದಲ್ಲಿ ಎಚ್ಚೆತ್ತು ಎಲ್ಲ ಭೇದ ಭಾವಗಳನ್ನು ಬದಿಗಿಟ್ಟು ನಾಡಿನ ಮತ್ತು ಜನರ ರಕ್ಷಣೆಗೆ ಮತ್ತು ಮುನ್ನಡೆಗೆ ಶ್ರಮ ಜೀವಿ ಹಾಗೂ ಬುದ್ಧಿಜೀವಿ ಜನರು ಇಂದು ಸನ್ನಧರಾಗಬೇಕಾಗಿದೆ. ನಮ್ಮ ರಾಜ್ಯವನ್ನು ಆಳಿರುವ 3 ಮುಖ್ಯ ಪಕ್ಷಗಳು ತಮ್ಮಳಗೆ ಜಗಳವಾಡುತ್ತಾ ಒಳ ಗಿಂದೊಳಗೆ ಕೈ ಜೋಡಿಸುತ್ತಾ ಈ ನಾಡನ್ನು ಎಲ್ಲಿಗೆ ತಲುಪಿಸುತ್ತಾರೆ ಎಂಬುವುದನ್ನು ಅಧ್ಯ ಯನ ಮಾಡುವುದಕ್ಕೆ ನಮ್ಮ ವಿ.ವಿ.ನಿಲಯ ಗಳು ಮುಂದಾಗಬೇಕು. ಕೇಂದ್ರ ಸರಕಾರ ಇದೀಗ ಸಂಸತ್ತಿನ ಮುಂದೆ ನಮ್ಮ ದೇಶಕ್ಕೆ ವಿದೇಶಿ ವಿ.ವಿದ್ಯಾಲಯಗಳ ಮುಕ್ತ ಪ್ರವೇಶಕ್ಕೆ ಹಾಗೂ ವ್ಯವಹಾರ ಕುದುರಿಸುವುದಕ್ಕೆ ಅವ ಕಾಶ ನೀಡಲು ಹೊರಟಿದೆ.

ಕರ್ನಾಟಕವಂತೂ ಈ ದಿಸೆಯಲ್ಲಿ ಮತ್ತೆಲ್ಲರಿಗಿಂತ ಮೊದಲು ವಿದೇಶಿಯರೊಂದಿಗೆ ತಾವೂ ಸೇರಿ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರದ ಜಾಗತೀಕರಣಗೊಳಿ ಸಲು ತಯಾರಾಗಿದೆ. ಸ್ವಾತಂತ್ರ ಬಂದಾಗ ರಾಜ್ಯಕ್ಕೊಂದು ವಿ.ವಿ. ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುವುದಕ್ಕಾಗಿ ಸ್ಥಾಪನೆ ಗೊಂಡಿದ್ದವು. ಇಂದು ಒಂದೇ ರಾಜ್ಯದಲ್ಲಿ ಹತ್ತಾರು ವಿ.ವಿ.ಗಳಿವೆ. ಸಾಲದುದಕ್ಕೆ ಡೀಮ್ಡ್ ಯುನಿವರ್ಸಿಟಿಗಳು ಅಂದರೆ ಪರಿಕಲ್ಪಿತ ವಿ.ವಿ.ಗಳಿವೆ. ಕಲಿಸುವ ವಿಷಯಗಳು ಹಾಗೂ ಕಲಿಸುವವರ ಅರ್ಹತೆಗಳು, ವಿದ್ಯಾರ್ಥಿಗಳಿಂದ ವಸೂಲು ಮಾಡಬಹು ದಾದ ಶುಲ್ಕಗಳು ಏನು, ಎಷ್ಟು ಎಂಬುವುದನ್ನು ಆಯಾ ವಿದ್ಯಾಲಯಗಳೆಂದು ಪರಿಗಣಿಸಲಾ ಗುವ ಅಂಗಡಿಗಳೇ ನಿರ್ಣಯಿಸಬಹುದಾಗಿದೆ. ಹೀಗೆ ಸರಕಾರದಿಂದ ಅಧಿಕಾರ ಪಡೆದಿರುವ ಸಂಸ್ಥೆಗಳು ಅಧಿಕಾರ ಪತ್ರವು ಕೈ ತಲಪಿದ ಮರು ಕ್ಷಣದಲ್ಲಿಯೇ ಸರಕಾರದ ಆಜ್ಞೆಗಳನ್ನು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ವರ್ತಿಸಲು ಆರಂಭಿಸಿವೆ ಎನ್ನು ವುದು ಕಳವಳಕ್ಕೆ ಕಾರಣವಾಗಿದೆ. ಜಾತಿ ಗೊಂದು ಮಠ, ಮಠದ ವ್ಯಾಪ್ತಿಯಲ್ಲಿ ಊರಿ ಗೊಂದು ಸಂಸ್ಥಾನ, ಸಂಸ್ಥಾನಗಳೊಳಗಡೆ ಯೋಗವೋ, ಭೋಗವೋ, ರಾಸಕ್ರೀಡೆಯೋ, ಯಮುನಾ ತೀರದಲ್ಲಿ ನಡೆದಂಥಹ ಮಹಿಳಾ ಮಣಿಗಳ ವಸ್ತ್ರಾಪಹರಣವೋ ಏನು ಬೇಕಾ ದರೂ ನಡೆಯಬಹುದು ಎಂಬ ಧರ್ಮ ಇಂದು ಸಾರ್ವಜನಿಕ ಜೀವನವನ್ನು ಕಲುಷಿತ ಗೊಳಿಸುತ್ತಿದೆ.

ಅದೇ ಸಮಯದಲ್ಲಿ ಸರಕಾರದ ಅನುಮತಿ ಇದ್ದೇ ನಡೆಯುವ ಸಾರ್ವಜನಿಕ ನರ್ತನಗ್ರಹಗಳಲ್ಲಿಯೋ ಪಾನಮಂದಿರಗಳ ಲ್ಲಿಯೋ, ಭೋಜನ ಶಾಲೆಗಳಲ್ಲಿಯೋ ಯಾವುದನ್ನು ತಿನ್ನಬೇಕು, ಯಾವುದನ್ನು ಕುಡಿಯಬೇಕು ಯಾವ ರೀತಿ ಕುಣಿಯಬೇಕು ಎಂಬಿತ್ಯಾದಿಗಳನ್ನೆಲ್ಲ ಧರ್ಮ ಒಂದರ ಹೆಸರಲ್ಲಿ ಧರ್ಮ ಸಂರಕ್ಷಕ ಪರಿವಾರದವರು ದೊಣ್ಣೆ ಹಿಡಿದಾ ದರೂ ಆಚರಣೆಗೆ ತರಿಸುವ ಆಡಳಿತ ಇಂದು ನಡೆಯುತ್ತಿದೆ. ಇದಕ್ಕೆ ಕೊನೆ ಎಲ್ಲಿಯೊ ತಿಳಿ ಯದು. 2010-11ರ ಮುಂಗಡ ಪತ್ರ ಸಲ್ಲಿಸುವುದಕ್ಕಿಂತ ಮೊದಲೇ ಹೆಚ್ಚು ಕಡಿಮೆ ರೂ. 500 ಕೋಟಿಗಿಂತಲೂ ಹೆಚ್ಚು ತಮ್ಮವರೆಂದು ತೋರುವವರಿ ಗೆಲ್ಲ ಖಜಾನೆಯಿಂದ ವಿತರಿಸಿದ ವಿತ್ತ ಸಚಿವರೂ ಆಗಿರುವ ಮುಖ್ಯ ಮಂತ್ರಿಗಳು ಅದಕ್ಕೆ ಲೇಖಾನುದಾನದ ಮೂಲಕ ಒಪ್ಪಿಗೆ ಪಡೆದುದಲ್ಲದೆ ಮುಂದಿನ ವರ್ಷದಲ್ಲಿ ಮುಂಗಡವಾಗಿಯೇ ಕೋರಿರುವಂಥಾಹ ಸಾರ್ವಜನಿಕ ವಿತ್ತದ ದುರ್ವಿನಿಯೋಗದ ಪರಮಾವಧಿಯು ವಿಧಾನ ಸೌಧದಲ್ಲಿ ಪ್ರಕಟವಾಗಿದೆ.

ಮುಂದಿನ ಸಾಲಿನಲ್ಲಿ ಅದೆಷ್ಟು ಯಜ್ಞಗಳು, ಯಾಗಗಳು, ಜಾತ್ರೆಗಳು, ಸಂತೆಗಳು, ಶತಮಾನಗಳ ಹಿಂದೆ ಅರಸರಾಗಿದ್ದವರ ಪಟ್ಟಾಭಿಷೇಕಗಳ ವೈಭವದ ಪುನರುಜ್ಜೀವನಗಳು ನಡೆಯಲಿದೆಯೋ ಕಾದು ನೋಡಬೇಕಿದೆ. ಅವೆಲ್ಲವೂ ಈ ದೇಶದ ಅಭಿವದ್ಧ್ದಿಯ ಸಂಕೇತವೆಂಬ ವಾದವನ್ನಂತೂ ಆಳುವವರು ಶಾಸನ ಸಭೆಗಳಲ್ಲಿ ಮಂಡಿಸಿದ್ದಾಗಿದೆ. ಧ್ವನಿ ಮತದ ಮೂಲಕವೋ, ಮೌನವಾಗಿಯೋ, ಆಪರೇಶನ್ ಕಮಲದ ಪ್ರಯೋಗದಿಂದಲೋ ಅಂಗೀಕಾರ ಪಡೆಯುವ ಪ್ರಯತ್ನ ವಂತೂ ನಡೆದೇ ಇದೆ. ಇದೆಲ್ಲ ಯಾರ ತಪ್ತಿಗಾಗಿ, ಯಾರ ಪೋಷಣೆಗಾಗಿ ಎನ್ನುವ ಪ್ರಶ್ನೆ ಮಾತ್ರ ನಮ್ಮನ್ನು ಕಾಡುತ್ತದೆ.

ನಮ್ಮ ದೇಶದ ಪೂರ್ತಿಯಾಗಿ ಪೆಟ್ರೋಲ್, ಡೀಸೆಲ್, ಮತ್ತಿತರ ರಾಸಾ ಯನಿಕ ಉತ್ಪನ್ನಗಳ ಬೆಲೆ ಏರಿಕೆಯಿಂದ ಎಲ್ಲಾ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಚಾಲನೆ ನೀಡಲಾಗಿದೆ. ಸರಕಾರಿ ಮತ್ತು ಖಾಸಗಿ ಸಾರಿಗೆಯ ವೆಚ್ಚ ತೀವ್ರವಾಗಿ ಏರಿಕೆಯಾಗಿದೆ. ರೈತರಿಗೆ ಸಹಾಯವಾಗುವ ಮುಸುಕಿನೊಳಗೆ ಹಾಲಿನ ಬೆಲೆ ಏರಿಸಿರುವುದು ಮಕ್ಕಳಿಗೂ, ವದ್ಧರಿಗೂ ಮಾರಕವಾಗುವಂಥ ಪರಿಣಾಮವನ್ನು ಉಂಟುಮಾಡುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರವೇಶ ದೊರಕಬೇಕಾದರೆ ಶುಲ್ಕ ತೆರಬೇಕೆಂಬ ನಿಯಮದ ಜೊತೆಗೆ ಔಷಧಿಗಳನ್ನೂ ಹಾಗೂ ಇತರ ಆವಶ್ಯಕ ವಸ್ತುಗಳನ್ನು ಪಡೆದು ಕೊಳ್ಳುವುದಕ್ಕೆ ಬೆಲೆ ತೆರಬೇಕಾದಂಥ ಕ್ರಮ ಜಾರಿಗೆ ಬಂದಿದೆ. ಉತ್ಸವಗಳಿಗೆ ಸರಕಾರದ ಬೊಕ್ಕಸದಿಂದ ಹಣ ನೀಡು ವುದಕ್ಕೆ ಬದಲಾಗಿ ಆ ಹಣವನ್ನು ಮಕ್ಕಳಿಗೂ ರೋಗಿಗಳಿಗೂ ಔಷಧೋಪಚಾರಕ್ಕೆ ಮತ್ತು ಚಿಕಿತ್ಸೆಗೆ ನೀಡಿದರೆ ಮುಂದಿನ ಚುನಾವಣೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂಬ ತರ್ಕ ಇಂದಿನ ಸರಕಾರದ್ದಾಗಿದ್ದಂತಿದೆ. ಕೇಂದ್ರ ಸರಕಾರಕ್ಕೆ ಮೊರೆ ಇಡೋಣ ಎಂದರೆ ಅಲ್ಲಿಯೂ ಪಕ್ಷ ಬೇರೆಯಾದರೂ ಆರ್ಥಿಕ ನೀತಿ, ಆಡಳಿತ ರೀತಿ ಇಲ್ಲಿಯವರಂಥದ್ದೇ ಆಗಿರುತ್ತದೆ ಎಂದು ಹೇಳಬೇಕಾಗುತ್ತದೆ.

ಮುಂಗಡ ಪತ್ರದಲ್ಲಿ ಬೆಲೆ ಏರಿಕೆ ತಡೆ ಗಟ್ಟುವ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಭಾಷಣ ಮಾತ್ರ ಬಿಗಿಯುವ ಹಳೆಯ ಜಾಡನ್ನು ಮುಂದುವರಿಸಿದೆ. ದುಬಾರಿ ಬೆಲೆ ತೆತ್ತು ಆಹಾರ ವಸ್ತುಗಳನ್ನು ವಿದೇಶಗಳಿಂದ ಆಮದುಮಾಡಿಕೊಳ್ಳುವ ದು:ಸ್ಥಿತಿಗೆ ನಮ್ಮ ದೇಶವನ್ನು ನಮ್ಮನ್ನು ಆಳುವವರು ತಂದು ನಿಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದ ಈ ನಾಡು ಇಂದು ಕೄಷಿ ಉತ್ಪಾದನೆಯೇ ಅಸಾಧ್ಯ ಎಂಬ ನೆಲೆಗೆ ಬಂದು ನಿಂತಿದೆ. ರಸಗೊಬ್ಬರಗಳು, ರಾಸಾಯನಿಕ ವಸ್ತುಗಳ ಬಳಕೆ ಮಿತಿ ಮೀರಬಾರದು ನಿಜ. ಆದರೆ ಸಂಪೂರ್ಣ ನಿಷೆೇಧಗೊಂಡರೆ ಕೄಷಿಕನ ಭೂಮಿಯಲ್ಲಿ ಬೆಳೆ ಬರುವುದಾದರೂ ಹೇಗೆ? ಕರ್ನಾಟಕದ ಕೆಲವು ಕಡೆಗಳಲ್ಲಿ ರಸಗೊಬ್ಬರಕ್ಕೋಸ್ಕರ ಚಳವಳಿ ನಡೆಸಿದ ರೈತರಿಗೆ ಬಂದೂಕಿನ ಗುಂಡು ಉಡುಗೊರೆ ಸಿಕ್ಕಿದ್ದು ನೆನಪಿದೆಯಷ್ಟೇ! ಸಾವಯವ ಗೊಬ್ಬರದ ಬಗ್ಗೆ ಮಾತನಾಡುವ ಕಷಿ ಅಧಿಕಾರಿಗಳಿಗೆ ಅದಕ್ಕೆ ಬೇಕಾದಂಥ ಪರಿಸರವನ್ನು ಈ ಹಿಂದೆ ಸಂಪೂರ್ಣ ಹಾಳುಗೆಡವಲಾಗಿದೆ ಎಂಬ ವಿಷಯ ಗೊತ್ತಿಲ್ಲವೇನು?ಜಾನುವಾರು ಸಾಕಲು ಸಾಧ್ಯವೇ ಇಲ್ಲದ ರೈತ ಉಳುಮೆ ಮಾಡಲಾಗದೆ ಕಂಗಾಲಾಗಿದ್ದಾನೆ. ಹಸಿರು ಗೊಬ್ಬರಕ್ಕೆ ಬೇಕಾದ ಸೊಪ್ಪು ಸೊದೆಗಳು ಬೆಳೆಯುವಂಥ ಬೆಟ್ಟ ಗುಡ್ಡಗಳು ಇಂದು ಬೋಳು ಗುಡ್ಡೆಗಳಾಗಿವೆ. ಕೃಷಿ ಭೂಮಿಯು ಕೃಷಿಯೇತರ ಉದ್ದೇಶಗಳಿಗೆಂದು ತುಂಡು ತುಂಡಾಗಿ ಮಾರಾಟವಾಗಿ ಹೋಗಿದೆ.

ದ.ಕನ್ನಡದ ಮತ್ತು ಮಲೆನಾಡಿನ ನದಿಗಳು ಹರಿಯುವ ಖಣಿವೆಗಳಂತೂ ಬರಡು ಭೂಮಿಯಾಗುವಂತೆ ನದಿಗಳನ್ನು ತಮ್ಮ ಜಮೀನುಗಳಿಗೆ ಹರಿಸುವ ಹುನ್ನಾರವನ್ನು ಇಂದಿನ ಆಳುವವರು ಬಹುಮಟ್ಟಿಗೆ ಗುಟ್ಟಿನಲ್ಲಿ ಜರಗಿಸುತ್ತಿದ್ದಾರೆ. ಹೀಗಿರುವಾಗ ಸಾವಯವ ಕೃಷಿಯ ಮಾತು ಬರೇ ಮೊಣ ಕೈಗೆ ಬೆಲ್ಲ ಸವರುವ ಹುನ್ನಾರವಲ್ಲದೆ ಮತ್ತೇನು? ಸರಕಾರದ ರೀತಿ ನೀತಿಗಳು ಬದಲಾಗಬೇಕು, ಜನರ ಆರ್ಥಿಕ ಸುಧಾರಣೆಯೊಂದಿಗೆ ಹಾಗೂ ಬದುಕು ಆರೋಗ್ಯ, ಶಿಕ್ಷಣ, ಸಮನ್ವಯತೆಗಳ ಬೆಳವಣಿಗೆಯೊಂದಿಗೆ ಸ್ವಾವಲಂಬನೆ ಮತ್ತು ಆಂತರಿಕ ಸಂಪನ್ಮೂಲಗಳ ಸದ್ಬಳಕೆ ಮುಖ್ಯವಾಗಿರುವಂಥ ಅಭಿವದ್ಧಿ, ಮಾರ್ಗಗಳ ಯೋಜನೆಗಳನ್ನು ಸರಕಾರಗಳು ಮುಂದಿಟ್ಟು ಅನುಮತಿ ಪಡೆಯಬೇಕು. ಅದರಂತೆ ಸಾರ್ವಜನಿಕರ ಕೂಡುವಿಕೆಯಿಂದ ಅವುಗಳನ್ನು ನೆರವೇರಿಸಬೇಕು. ಪಂಚಾಯತ್ ಮಟ್ಟದಿಂದ ಸಂಸತ್ತಿನ ಮಟ್ಟದವರೆಗೆ. ಈ ದೃಷ್ಟಿಕೋನದಿಂದ ಅಧಿಕಾರದಲ್ಲಿರುವವರು ವರ್ತಿಸಿದಾಗ ದೇಶವು ಮುನ್ನಡೆಯುತ್ತದೆ.

ಅಲ್ಲವಾದರೆ ಕೋಮು, ಜಾತಿ, ಲಿಂಗ, ಪ್ರಾದೇಶಿಕತೆ, ಭಾಷೆ, ಯಾವು ಯಾವುದೋ ಕಾರಣಗಳನ್ನು ಮುಂದೊಡ್ಡಿ ಜನರನ್ನು ಛಿದ್ರಗೊಳಿಸಿ ಉಳ್ಳವರು ಅಧಿಕಾರಸ್ಥರು ಈ ನಾಡಿನ ಭವಿಷ್ಯತ್ತನ್ನು ಹಿಂದಿರುಗಿಸಲಾರದಂತಹ ಅಧೋಗತಿಗೆ ತಲಪಿಸುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಕಾಲ ಮೀರುವ ಮೊದಲೇ ಎಚ್ಚರವಾಗೋಣ, ಒಂದಾಗೋಣ, ವಿಚಾರ ಮಾಡೋಣ, ಕಾರ್ಯಪ್ರವತ್ತರಾಗೋಣ. ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯತ್ತು ನಮ್ಮ ಕೈಯಲ್ಲೇ ಇದೆ. ನಮ್ಮ ಭೂಮಿ, ನಮ್ಮ ಖನಿಜಗಳು, ನಮ್ಮ ನೆಲ, ಜಲ, ಸಂಪತ್ತುಗಳನ್ನೆಲ್ಲ ತಮ್ಮ ಲಾಭಕ್ಕ್ಕಾಗಿ ಕೊಳ್ಳೆ ಹೊಡೆಯುವವರ ಅಧಿಕಾರ ಯಾವರಾಜ್ಯದಲ್ಲೇ ಆಗಲಿ, ಕೇಂದ್ರದಲ್ಲೇ ಆಗಲಿ ಕೊನೆಗಾಣಬೇಕೆಂಬ ಗುರಿಯಿಟ್ಟುಕೊಂಡು ಹೋರಾಟಕ್ಕೆ ಸನ್ನದ್ಧರಾಗುವುದು ಇಂದಿನ ಯುವಜನರ, ಶ್ರಮಜೀವಿಗಳ ಮತ್ತು ಬುದ್ಧಿಜೀವಿಗಳ ಕರ್ತವ್ಯವಾಗಿದೆ. ಇದು ನಮ್ಮ ಕನ್ನಡ ಜನರ ಪರಂಪರೆ. ಕುವೆಂಪುರವರನ್ನು ಅನುಸರಿಸಿ ಹೇಳುವುದಾರೆ ನೂರು ಶಾಸ್ತ್ರಗಳನ್ನು, ಮನುಧರ್ಮ ಶಾಸ್ತ್ರವನ್ನು, ಕೌಟಿಲ್ಯನ ಅರ್ಥಶಾಸ್ತ್ರವನ್ನು, ಕಷ್ಣದೇವರಾಯನ ಆಡಳಿತ ವೈಖರಿಯನ್ನೂ ಬದಿಗಿಟ್ಟು ಭಾರತದ ಏಕತೆ, ರಾಜ್ಯದ ಜನರ ಐಕ್ಯತೆ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಇವುಗಳಿಗೆ ಗುರಿ ಇಟ್ಟು ಆಡಳಿತ ನಡೆಯುವಂತಾಗಲು ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣ.

ಪರಭಾರೆ ಇಲ್ಲ; ಸ್ವಾಗತಾರ್ಹ ಆದರೆ ಎಚ್ಚರ ಇರಲಿ

(ಬರೆದದ್ದು: ಮಾರ್ಚ್ 16, 2010) ವಾರ್ತಾಭಾರತಿಯಿಂದ

[dropcap]ಇ[/dropcap]ಡೀ ರಾಜ್ಯದ ಪ್ರಾಜ್ಞರನ್ನು ಮತ್ತು ಸಾಮಾನ್ಯ ಜನರನ್ನು ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗೆ ಪ್ರಚೋದಿಸಿದ್ದ ಹಂಪಿ ವಿವಿಯ ಭೂಮಿ ಪರ ಭಾರೆಯ ಪ್ರಶ್ನೆಯನ್ನು ಕೈ ಬಿಡಲಾಗಿದೆ ಎಂದು ಮುಖ್ಯ ಮಂತ್ರಿಗಳು ಘೋಷಿಸಿರುವುದು ಸಮಾಧಾನ ತಂದಿದೆ. ಆದರೆ ಇದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಕಾರ್ಯತಃ ವಿಜಯನಗರ ಸಾಮ್ರಾಜ್ಯ ಪುನಶ್ಚೇತನ ಪ್ರತಿಷ್ಠಾನದ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಗಣಿ ಭೂಮಿ ಕಬಳಿಕೆದಾರರು ಸರಕಾರದ ರಕ್ಷಣೆಯಲ್ಲಿ ಅಮೂಲ್ಯ ನೈಸರ್ಗಿಕ ಸಂಪತ್ತನ್ನು, ಅರಣ್ಯ ಭೂಮಿ ಮತ್ತು ಕಷಿ ಭೂಮಿ ಇತ್ಯಾದಿಗಳನ್ನು ಕಬಳಿಸದಂತೆ ಪಾರದರ್ಶಕ ಕ್ರಮಗಳನ್ನು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಘೋಷಿಸಬೇಕು. ಜನರಿಗೆ ಕನ್ನಡ ಭಾಷೆ, ಸಂಸ್ಕೃತಿ, ನಾಡುಗಳ ಅಭಿವದ್ಧಿ ಆಗಬೇಕೆಂಬ ಆಸಕ್ತಿ ಇದೆ.

ಆ ಕಾರ್ಯವನ್ನು ಆರಂಭದಿಂದ ಈ ವರೆಗೆ ನಡೆಸುತ್ತಾ ಬಂದಿರುವ ಹಂಪಿ ವಿವಿಗೆ ಹೆಚ್ಚಿನ ಭೂಮಿ ಅನುದಾನಗಳು ಹಾಗೂ ಅಭಿವದ್ಧಿ ಕಾರ್ಯ ಗಳಿಗೆ ನೆರವು ಮೊದಲಾದವುಗಳನ್ನು ನೀಡುವುದಲ್ಲದೆ ಆ ವಿವಿಯು ಒಂದು ಸ್ವಾಯತ್ತೆ ಸಂಸ್ಥೆಯಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಪ್ರಮಾಣಿಕವಾಗಿದ್ದರೆ ಅವರು ಬಳ್ಳಾರಿಯ ಗಣಿಗಾರಿಕೆಗೆ ಸಂಬಂಧಿಸಿದ ಭೂ ಹಗರಣಗಳ ಬಗ್ಗೆ ಜಸ್ಟೀಟ್ ಯುಎಲ್ ಭಟ್ ಅವರ ತನಿಖಾ ಆಯೋಗವು ನಡೆಸುತ್ತಿದ್ದ ವಿಚಾರಣೆಯನ್ನು ನಿಲ್ಲಿಸಿ ಅದನ್ನು ಕರ್ನಾಟಕ ಲೋಕಾಯುಕ್ತಕ್ಕೆ ಒಪ್ಪಿಸಲಾಗಿದೆಯಷ್ಟೆ. ಲೋಕಾಯುಕ್ತವು ಈಗಾಗಲೇ ತನಿಖೆ ಮುಗಿಸಿ ಸರಕಾರಕ್ಕೆ ನೀಡಿರಬಹುದಾದ ವರದಿಯನ್ನು ಸರಕಾರವು ತಡಮಾಡದೆ ಸ್ವೀಕರಿಸಿ ಅದರನ್ವಯ ಎಲ್ಲ ಅಪರಾಧಿಗಳ ಮೇಲೆ ಕ್ರಮ ಜರುಗಿಸಬೇಕು. ಅವರ ಇತ್ತೀಚೆಗಿನ ಕಾರ್ಯ ಕಲಾಪಗಳನ್ನು ಮತ್ತು ನಡೆ ನುಡಿಗಳನ್ನು ವೀಕ್ಷಿಸಿದಾಗ ಅವರು ಬಳ್ಳಾರಿ ಮೂಲದ ಭೂ ಕಬಳಿಕೆದಾರರ ಮತ್ತು ಗಣಿ ಕಬಳಿಕೆ ದಾರರ ಅಂಕಿತ ಮೀರಿ ವರ್ತಿಸುವ ಶಕ್ತಿ ಧೈರ್ಯವನ್ನು ಹೊಂದಿಲ್ಲ ಎಂದು ಕಂಡು ಬರುತ್ತದೆ. ಮುಖ್ಯ ಮಂತ್ರಿಗಳಾಗಿ ಅಂಥಹ ದುಷ್ಟಶಕ್ತಿಯನ್ನು ಹದ್ದುಬಸ್ತಿಗೆ ತರುವ ಧೈರ್ಯವನ್ನು ತಳೆದು ತನಗಿರುವ ಅಧಿಕಾರವನ್ನು ಪ್ರಯೋಗಿಸಬೇಕೆಂದು ಸಾರ್ವಜನಿಕರು ಅಪೇಕ್ಷಿಸುತ್ತಾರೆ.

ಕರ್ನಾಟಕದ ಜನ ನಾಡಿನ ನೆಲ, ಜಲ, ಅರಣ್ಯ ನೈಸರ್ಗಿಕ ಸಂಪತ್ತುಗಳನ್ನು ಕಾಪಾಡುವುದಕ್ಕೆ ಮತ್ತು ಅಭಿವದ್ಧಿ ಪಡಿಸುವುದಕ್ಕೆ ಸುಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕೆಂದು ಕನ್ನಡದ ಜನತೆಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅದೊಂದೇ ಇಂದಿನ ಸಮಸ್ಯೆಗಿರುವ ಪರಿಹಾರ.

ಚೆಲುವ ಕನ್ನಡ ನಾಡು ಆರು ದಶಕಗಳಲ್ಲಿ ಎಲ್ಲಿಂದ ಎಲ್ಲಿಗೆ?

ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬರೆದ ಲೇಖನ  (ದಿನಾಂಕ ಫೆಬ್ರವರಿ 24, 2010)

[dropcap]ಕ[/dropcap]ರ್ನಾಟಕದ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 1947 ರಲ್ಲಿ ತೆಂಕನಾಡು ಕಾಸರಗೋಡಿನಲ್ಲಿ ಅನೇಕ ನಿರೀಕ್ಷೆಗಳ ಮತ್ತು ಹೋರಾಟದ ಕೆಚ್ಚಿನ ನಡುವೆ ಜರಗಿತ್ತು. ಕಾಸರಗೋಡು ಈ ಬರಹಗಾರನ ಹುಟ್ಟೂರು. ಅಂದಿನ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸ್ವಾಗತದ ವ್ಯವಸ್ಥೆ ನಡೆಸಿದ್ದ ಸ್ವಯಂ ಸೇವಕ ತಂಡದಲ್ಲಿ ಓರ್ವ ಕಾರ್ಯ ನಿರ್ವಾಹಕನಾಗಿ ಈತ ಆ ಸಮ್ಮೇಳನದಲ್ಲಿ ಭಾಗಿಯಾಗಿದ್ದ. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬದುಕು ಬಲುಹಿನ ಬೀಡು, ಸದಭಿಮಾನದ ಗೂಡು” ಎಂಬುದು ಅಂದಿನ ಸಾಹಿತ್ಯ ಪರಿಷತ್ತಿನಲ್ಲಿ ಮೊಳಗಿದ್ದ ಕನ್ನಡ ನಾಡ ಗೀತೆಯಾಗಿತ್ತು. ಅದಾಗಿ 63 ವರ್ಷಗಳೇ ಸಂದು ಹೋಗಿವೆ. ಈ ಅವಧಿಯಲ್ಲಿ ಪರ್ಯಾಯವಾಗಿ ಭೂ ಸ್ವಾಮಿಗಳ, ಬಂಡವಾಳಗಾರರ, ಅರಸೊತ್ತಿಗೆಗಳ ಪ್ರತಿನಿಧಿಗಳನ್ನೊಳಗೊಂಡ ಎಲ್ಲ ರಾಜಕೀಯ ಪಕ್ಷಗಳು ಕರ್ನಾಟಕವನ್ನು ಆಳಿವೆ.  ಕರ್ನಾಟಕ ಏಕೀಕರಣವಾಗಿ 53 ವರ್ಷಗಳೇ ಆಗಿ ಹೋಗಿವೆ. ಜಾತ್ಯಾತೀತ ಜನತಾದಳ ಮತ್ತು ಹಿಂದುತ್ವವಾದಿ ಭಾಜಪ ಸಮ್ಮಿಳಿತವಾಗಿ 20 ತಿಂಗಳುಗಳ ಕಾಲ ಸರಸವಾಡುತ್ತಾ ಈ ನಾಡನ್ನು ಇತ್ತೀಚೆಗೆ ಆಳಿವೆ. ಕೊನೆಗೀಗ ಕಮಲ ಶಸ್ತ್ರ ಚಿಕಿತ್ಸೆ ಹಾಗೂ ಕುದುರೆಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರದ ಮೂಲಕ ಹಿಂದುತ್ವವಾದಿಗಳ ಎದುರಿಲ್ಲದ ಆದರೆ ಒಳಜಗಳ ಮುಗಿಯದ ಆಡಳಿತ ನಡೆಯುತ್ತಿದೆ. ಈ ಅವಧಿಯಲ್ಲಿ ಮೊನ್ನೆ ಗದುಗಿನ ಕುಮಾರವ್ಯಾಸನ ನಾಡಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮತ್ತೊಮ್ಮೆ ಜರಗಿದ್ದುದನ್ನು ನಾವು ಗಮನಿಸಿದ್ದೇವೆ. ಈ ಕಾಲಾವಧಿಯ ನಡುವೆ ಉದಯವಾದ ಕನ್ನಡ ನಾಡು ಎಲ್ಲಿಂದ ಎಲ್ಲಿಗೆ ತಲುಪಿದೆ ಎಂದು ನೋಡುವಾಗ ಜನರ ಬವಣೆಗಳ ನಡುವೆ ಆಳುವವರ ದುಂದುಗಾರಿಕೆಯ ಚಿತ್ರಣ ಕಣ್ಣ ಮುಂದೆ ಕುಣಿಯುತ್ತಿದೆ.  ಸಮ್ಮೇಳನದ ಅದ್ಯಕ್ಷೆ ನಾಡೋಜ ಪ್ರಶಸ್ತಿ ವಿಜೇತ ಡಾ.ಗೀತಾ ನಾಗಭೂಷಣ್ ಅವರು ನಮ್ಮ ಕನಸೆಲ್ಲಿ ನುಚ್ಹು ನೂರಾಗಿದೆ ಎಂಬ ಅಳಲನ್ನು ತೋಡಿಕೊಂಡರು. ಕರ್ನಾಟಕದ ನಾಡು ನುಡಿ ಜನ ಜೀವನ ಆರ್ಥಿಕ ಮತ್ತು ಸಾಂಸ್ಕ್ರತಿಕ ಅಭಿವೃದ್ಧಿಯ ಸಲುವಾಗಿ ಸಾಹಿತಿಗಳು ಹೋರಾಟಕ್ಕೆ ಇಳಿಯಬೇಕು,  ಜನರು ಜಾತಿ, ಮತ, ಲಿಂಗ, ಪ್ರಾದೇಶಿಕ ಭೇಧ ಭಾವಗಳನ್ನು ಬದಿಗಿಟ್ಟು ಭವ್ಯ ಕನ್ನಡ ನಾಡನ್ನು ಕಟ್ಟುವ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಕರೆ ಕೊಟ್ಟಿದ್ದಾರೆ.  ಕಾಸರಗೋಡಿನಿಂದ ಗದಗಿಗೆ ಕನ್ನಡದ ತೇರು ಸಾಗಿ ಬಂದಾಗ ಮುಂದಿನ ಹಾದಿ ಎಷ್ಟು ಕಠಿಣವಾದದ್ದು ಮತ್ತು ದೀರ್ಘವಾದದ್ದು ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಆದರೆ ಅದೇ ಸಮಯದಲ್ಲಿ ಸಮ್ಮೇಳನದ ಅಧ್ಯಕ್ಷೆಯವರ ಮಾತಿಗೆ ದ್ವನಿ ಕೂಡಿಸುವ ಸಾಹಿತಿಗಳ ಭಾಷಣಗಳು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ.

ಕಾಸರಗೋಡನ್ನು ಕನ್ನಡನಾಡು ಕಳೆದುಕೊಂಡಿದೆ. ಆದರೆ ಕನ್ನಡ ಅಲ್ಲಿ ಜೀವಂತವಿದೆ. ತುಳು, ಕನ್ನಡ, ಮಲಯಾಳ ಮತ್ತು ಅವುಗಳ ಉಪಭಾಷೆಗಳು ಅಲ್ಲಿ ಸೌಹಾರ್ದತೆಯ ನೆಲೆಯಲ್ಲಿ ಸಮನ್ವಯತೆಯ ತಳಹದಿಯ ಮೇಲೆ ಜನಜೀವನವನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ನಿರತವಾಗಿವೆ ಎಂದರೆ ಕೇವಲ ಉಪಚಾರದ ಮಾತಲ್ಲ. ಕನ್ನಡ ಜನರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮುದಾಯಿಕ ಜೀವಂತಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಅಲ್ಲಿ ಮುಂದುವರಿದಿದೆ. ವಿದ್ವೇಷಗಳಿಗೆ ಎಡೆಕೊಡದೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಜೀವನದ ದಿಗ್ಗಜಗಳು ಅಲ್ಲಿ ನೆಲೆಸಿದ್ದಾರೆ ಮತ್ತು ಚಟುವಟಿಕೆಯಲ್ಲಿದ್ದಾರೆ ಎನ್ನುವುದು ಸಂತೋಷದ ಸಂಗತಿ.

ಆದರೆ ಗಂಡು ಮೆಟ್ಟಿನ ಕನ್ನಡ ನೆಲ ಎಂದುಕೊಳ್ಳುವ ಉತ್ತರ.ಕರ್ನಾಟಕದಲ್ಲಿ ಕನ್ನಡನಾಡನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವುದು ಹಾಗೂ ಕನ್ನಡದ ಸಂರಕ್ಷಣೆಯ ಹೆಸರಿನಲ್ಲಿ ಕರ್ನಾಟಕವನ್ನು ಹೋಳು, ಹೋಳುಗಳಾಗಿಸುವ ಚಳುವಳಿಗಳು ನಡೆಯುತ್ತಿರುವುದು ಆತಂಕದ ವಿಷಯವಾಗಿದೆ.  ನಮಗೊಂದು ಉಚ್ಛ ನ್ಯಾಯಾಲಯದ ಪೀಠ ಬೇಕು, ಗಡಿಗಳ ಪುನರ್ರಚನೆ ಈಗಿಂದೀಗಲೇ ನಡೆಯಬೇಕು ಇತ್ಯಾದಿ ಬೇಡಿಕೆಗಳು ಕರ್ನಾಟಕ ವಿಭಜನೆಗೊಳ್ಳಬೇಕೆಂಬ ರೂಪಕ್ಕೆ ಆಗಾಗ ತಿರುಗುತ್ತಿರುವುದು ಅಪಾಯದ ಸಂಕೇತವಾಗಿದೆ. ದೇಶದಲ್ಲಿ ಸಹಜವಾಗಿ ಇರುವಂತಹ ವೈವಿದ್ಯತೆಗಳೆಲ್ಲವನ್ನೂ ವೈರುಧ್ಯಗಳಾಗಿ ಹರಿತಗೊಳಿಸಿ ದೇಶವನ್ನೇ ಅಪಾಯಕ್ಕೆ ಗುರಿಪಡಿಸುವ ಪ್ರವೃತ್ತಿಗಳು ಕನ್ನಡ ನಾಡಿನಲ್ಲಿಯೂ ತೀವ್ರವಾಗಿಯೇ ಇವೆ. ಸಮ್ಮೇಳನದ ಅಧ್ಯಕ್ಷರು ಈ ಅಪಾಯವನ್ನು ಕುರಿತು ನೀಡಿರುವ ಎಚ್ಚರಿಕೆಯ ಮಾತನ್ನು ನಾಡಿನ ಮತ್ತು ದೇಶದ ಏಕತೆ, ಧೃಡತೆ ಮತ್ತು ಪ್ರಗತಿಯನ್ನು ಅಪೇಕ್ಷಿಸುವ ನಾವೆಲ್ಲರು ಸಹಾ ಬೆಂಬಲಿಸುತ್ತೇವೆ ಎಂದು ಹೇಳುವ ಅಗತ್ಯ ಇದೆ.

ನಮ್ಮ ಚೆಲುವ ಕನ್ನಡ ನಾಡಿನ ಇಂದಿನ ದುರವಸ್ಥೆಯ ಚಿತ್ರಣವನ್ನೊಮ್ಮೆ ಪಕ್ಷಿನೋಟದಂತೆ ಗಮನಿಸೋಣ.  ಹುಯಿಲಗೋಲ ನಾರಾಯಣರಾಯರು ರಚಿಸಿದ್ದ ಹಾಗೂ ಬೆಳಗಾವಿಯಲ್ಲಿ ಗಾಂಧಿಯವರ ಅಧ್ಯಕ್ಷತೆಯಲ್ಲಿ ಜರುಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ವಿದುಷಿ ಗಂಗೂಬಾಯಿ ಹಾನೆಗಲ್ ಅವರು ಹಾಡಿದ್ದ ಚೆಲುವ ಕನ್ನಡ ನಾಡಿನ ಗೀತೆ ಇಂದು ಎಲ್ಲರಿಗೂ ಮರೆತು ಹೋದಂತೆ ಕಾಣುತ್ತದೆ.  ಇಂದಿನ ಆಡಳಿತೆಗಾರರು ಶತಮಾನಗಳಷ್ಟು ಹಿಂದಿನ ಕಾಲದ ಅರಸುಗಳ ಕಾಲ್ಪನಿಕ ವೈಭವದ ಉತ್ಸವ ಒಂದರ ಹೆಸರಲ್ಲಿ 13 ಕೋಟಿ ರೂ.ಗಳನ್ನು ವೆಚ್ಹ ಮಾಡಲು ಒಪ್ಪಿಕೊಂಡು ನಿಜವಾಗಿ 75 ಕೋಟಿಗಳಷ್ಟು ಹಣವನ್ನು ಸಾರ್ವಜನಿಕ ಬೊಕ್ಕಸದಿಂದ ಖರ್ಚು ಮಾಡಿರುವ ವಾರ್ತೆ ಗದಗ ಸಮ್ಮೇಳನದ ಸಮಯದಲ್ಲೇ ಪ್ರಕಟವಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉಜಿರೆಯಿಂದ ಹಂಪಿಯವರೆಗೆ ನಡೆದ ನಿತ್ಯೋತ್ಸವಗಳಿಗೆ ಸರಕಾರದ ಬೊಕ್ಕಸದಿಂದ ಕಡಿಮೆ ಎಂದರೆ 100 ಕೋಟಿ ರೂ.ಗಳಾದರೂ ವ್ಯಯವಾಗಿದೆ. ಸರಕಾರದ ಬೊಕ್ಕಸದ ಹಣವು ತಮ್ಮ ಮತ್ತು ತಮ್ಮ ಪಕ್ಷದ ಖಾಸಗಿ ಸೊತ್ತೆಂದು ಪರಿಗಣಿಸಿ ಬೇಕಾಬಿಟ್ಟಿಯಾಗಿ ದೋಚಿ ಎಲ್ಲಿಗೋ ತಲಪಿಸುವ ದುರ್ವ್ಯವಹಾರವು ಕರ್ನಾಟಕದಲ್ಲಿಂದು ರಾಜಾರೋಷವಾಗಿ ನಡೆಯುತ್ತಿದೆ.  2009-10 ನೆಯ ವರ್ಷದ ಮುಂಗಡ ಪತ್ರದಲ್ಲಿ ವಿಧಾನ ಮಂಡಳದ ಅನುಮತಿ ಪಡೆಯದೆ ಖರ್ಚು ಮಾಡಿ ಮುಂದಿನ ವರ್ಷ ಅದಕ್ಕೆ ಅಸ್ತು ಎಣಿಸುವ ಕ್ರಮ ಇಂದು ಮಿತಿ ಮೀರಿ ಹೋಗಿದೆ. ಈ ಹಣ ಎಲ್ಲಿಗೆ ಹೋಗುತ್ತದೆ,  ಯಾರ ಬೊಕ್ಕಸಕ್ಕೆ ಹಾಗೂ ಯಾವುದಕ್ಕಾಗಿ ವಿನಿಯೋಗವಾಗುತ್ತದೆ ಎಂದು ತಿಳಿಯಬೇಕಾಗಿದೆ.

ಇದು ರೊಕ್ಕದ ವಿಚಾರವಾಯ್ತು. ಕನ್ನಡ ನಾಡಿನ ಫಲವತ್ತಾದ ಭೂಮಿ ಅದರೊಳಗಿನ ಖನಿಜ ಸಂಪತ್ತು ಅರಣ್ಯ ಸಂಪತ್ತು, ಮಾನವ ಸಂಪನ್ಮೂಲ ಇವೆಲ್ಲವೂ ಸಹಾ ಇಂದು ಅಧಿಕಾರದಲ್ಲಿರುವವರ ಗುಳುಂಕಾರಕ್ಕೆ ಗುರಿಯಾಗುತ್ತಿದೆ ಎಂಬ ಚಿತ್ರಣ ಎಲ್ಲೆಲ್ಲೂ ಕಂಡು ಬರುತ್ತದೆ. ಹೆಚ್ಹು ಕಡಿಮೆ 10 ಲಕ್ಷ ಕೋಟಿ ರೂ.ಗಳ ಬೆಲೆ ಬಾಳುವ ಸರಕಾರಿ ಜಮೀನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಾ ಕಳೆದ ಅನೇಕ ವರ್ಷಗಳಲ್ಲಿ ಖಾಸಗಿಯವರ ಕಬಳಿಕೆಗೆ ಒಳಗಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.  ರಾಜ್ಯದಾದ್ಯಂತ ಕಡಿಮೆ ಎಂದರೆ 6 ಲಕ್ಷ ಎಕ್ರೆ ಭೂಮಿಯನ್ನು ಹೀಗೆ ಕಬಳಿಸಲಾಗಿದೆ ಎಂದು ಹೇಳಲಾಗಿದೆ. ಸರಕಾರಕ್ಕೆ ತಿಳಿಯದೆ ಇದು ನಡೆಯಿತೇ? ಅಥವಾ ತಿಳಿದೂ ಸದ್ದಿಲ್ಲದೆ ನಡೆಯಿತೇ ಎನ್ನುವಂತಹ ನಿಜಾಂಶ ತಿಳಿಯಬೇಕಿದೆ. ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯೊಂದನ್ನು ತನಿಖೆಗೆ ನೇಮಿಸಿ ಕೈ ತೊಳೆದರೆ ರಾಜ್ಯಕ್ಕಾದ ನಷ್ಟವನ್ನು ಭರ್ತಿ ಮಾಡಿದಂತಾಗುವುದಿಲ್ಲ.

ಅಭಿವೃದ್ದಿ ಕಾರ್ಯಗಳಿಗೆ ದೇಶವನ್ನು ಅಡವಿಟ್ಟು ಸಾಲ ತಂದು ಒದಗಿಸಿದರೆ ಆ ಹಣದ ಸದುಪಯೋಗವಾದರೂ ಆಗದೆ ರಸ್ತೆ ಅಪಘಾತಗಳು, ರೋಗರುಜಿನಗಳು, ಬೀದಿ ನಾಯಿಗಳ ಕಾಟ, ಮುಚ್ಚದ ಕೊಳವೆ ಬಾವಿಗಳೊಳಗೆ ಬಿದ್ದು ಮರಿ ಮಕ್ಕಳ ಸಾವು ಇತ್ಯಾದಿ ದಿನ ನಿತ್ಯ ನಡೆಯುತ್ತಿರುವಾಗ ನಮ್ಮ ಮಂತ್ರಿ ಮಹಾಶಯರು ಒಣ ಭರವಸೆಗಳನ್ನು ನೀಡುವ ನಿತ್ಯೋತ್ಸವಗಳಲ್ಲಿ ನಿರತರಾಗಿರುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಎಲ್ಲ ಕಡೆ ಇಂತಹವುಗಳ ವಿರುದ್ದ ಪ್ರತಿಭಟನೆಗಳು ನಡೆಯುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿರುಪಾಗಲೇ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಜಮೀನಿನಲ್ಲಿ 80 ಎಕ್ರೆ ಜಮೀನನ್ನು ಯಾವುದೋ ಮಂದಿರವೋ, ಮಠವೋ, ಸ್ಮಾರಕವೋ ಕಟ್ಟುವ ಯೋಜನೆ ಇಟ್ಟುಕೊಂಡಿರುವ ಒಂದು ಖಾಸಗಿ ಪ್ರತಿಷ್ಠಾನಕ್ಕೆ ಸದ್ದಿಲ್ಲದೆ ಕೊಟ್ಟಿರುವ ಸುದ್ದಿ ಪ್ರಕಟವಾಗಿದೆ.  ಸಾಹಿತ್ಯ ಸಮ್ಮೇಳನವು ಇದರ ಬಗ್ಗೆಯೊ ಸಾರ್ವಜನಿಕ ಗಮನ ಸೆಳೆದಿದೆ.

ನಮ್ಮ ದೇಶಕ್ಕೊಂದು ಸಂವಿಧಾನವಿದೆ.  ಆಡಳಿತೆಗೆ ಸಂವಿಧಾನದಲ್ಲಿ ಮಾರ್ಗದರ್ಶಕ ಸೂತ್ರಗಳಿವೆ. ಗಣತಂತ್ರ ವ್ಯವಸ್ಥೆ ಸ್ಥಾಪಿತವಾದ ಬಳಿಕ ಎಷ್ಟೇ ಕುಂದು ಕೊರತೆಗಳಿದ್ದರೂ ಒಟ್ಟಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಆಡಳಿತ ವ್ಯವಸ್ಥೆ ಇದೆ. ಅವುಗಳ ಓರೆ ಕೋರೆಗಳನ್ನು ಸರಿಪಡಿಸಿಕೊಂಡು ವರ್ಷದಿಂದ ವರ್ಷಕ್ಕೆ ಉತ್ತಮಗೊಳಿಸುತ್ತಾ ಮುಂದೆ ಸಾಗುವುದು ಇಂದಿನ ಅಗತ್ಯವಾಗಿದೆ. ಆದರೆ ಎಲ್ಲಿ ಒಡಕು ಹುಟ್ಟಿಸಲು, ಎಲ್ಲಿ ಒಳ  ಜಗಳ ಸೃಷ್ಟಿಸಿ ಅರಾಜಕತೆ ಉಂಟು ಮಾಡಲು, ಎಲ್ಲಿ ಯಾರ ಆಹಾರದ ಸ್ವಾತಂತ್ರ್ಯವನ್ನೇ ಒಂದು ಧರ್ಮದ ಅಪ್ಪಣೆಗನುಗುಣವಾಗಿ ನಿರ್ಬಂಧಿಸಲು ಸಾಧ್ಯವಾಗುತ್ತದೆ ಅಂತಹವುಗಳನ್ನೇ ತಮ್ಮ ಗೊತ್ತು ಗುರಿ ಗಳನ್ನಾಗಿ ಇಟ್ಟುಕೊಂಡಿರುವವರ ಆಡಳಿತವು ಇಂದು ನಮ್ಮ ದೇಶದಲ್ಲಿ ಕೆಲವೆಡೆ ಅಟ್ಟಹಾಸ ಗೈಯುತ್ತಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಪ್ರಕಟವಾಗಿರುವ ನಮ್ಮ ಸಾಂಸ್ಕ್ರತಿಕ ಪರಂಪರೆಯ ಉದಾತ್ತ ಧ್ಯೇಯಗಳನ್ನು ಆಧಾರವಾಗಿ ಇಟ್ಟುಕೊಂಡು ಸಾಹಿತಿಗಳು, ಕವಿಗಳು, ಸಾಂಸೃತಿಕ ರಂಗದ ಪ್ರಮುಖರು ಜಾತಿ, ಮತ, ಪ್ರದೇಶ ಹಾಗೂ ಇನ್ನಿತರ ಸಂಕುಚಿತ ವಿಚಾರಗಳನ್ನೆಲ್ಲಾ ಬದಿಗಿಟ್ಟು ಒಕ್ಕೊರಳಿನಿಂದ ಕರ್ನಾಟಕದ ಮತ್ತು ದೇಶದ ಏಕತೆ ಮತ್ತು ಅಭಿವೃದ್ಧಿಯನ್ನು ಸಾಧಿಸುವತ್ತ ಗಮನ ಹರಿಸಬೇಕಿದೆ. ರಾಷ್ಟಕವಿ ಕುವೆಂಪುರವರ ಭಾರತಮಾತೆಯ ತನುಜಾತೆ, ಕರ್ನಾಟಕಮಾತೆ ಎಂಬ ಪರಿಕಲ್ಪನೆಯನ್ನು ಪ್ರತಿಯೊಂದು ಹೆಜ್ಜೆಯಲ್ಲೂ ನೆನಪಿಸಿಕೊಂಡು ಅವರ ಹಾಗೂ ಅವರ ಜೊತೆಯವರಾದ ಕನ್ನಡ ನಾಡಿನ ರಾಷ್ಟ್ರಕವಿಗಳ ಧ್ವನಿಯೊಂದಿಗೆ ಧ್ವನಿ ಕೂಡಿಸಿ ವಿಶ್ವ ಮಾನವ ಧರ್ಮವನ್ನು ದೃಢಪಡಿಸುವ ಪಣವನ್ನು ಈ ಸಂಧರ್ಭದಲ್ಲಿ ನಾವೆಲ್ಲರೂ ಕೈಗೊಳ್ಳಬೇಕಿದೆ. ಕರ್ನಾಟಕದಲ್ಲೊಂದು ಸವಿಸ್ತಾರವಾದ ಧರ್ಮ, ಜಾತಿ, ಮತ, ಲಿಂಗ, ಪ್ರಾದೇಶಿಕ ಹಿತದ ಪ್ರಾಮುಖ್ಯತೆ ಮೊದಲಾದವುಗಳಿಗೆ ಪ್ರತಿಯಾಗಿ ನಾಡು ನುಡಿ ಜನಗಳ ಸರ್ವತೋಮುಖ ಪ್ರಗತಿ ಮತ್ತು ಕ್ಷೇಮ ಸಾಧಿಸುವತ್ತ ನಮ್ಮ ಪಾಲಿನ ಕರ್ತವ್ಯವನ್ನು ನೆರವೇರಿಸಲು ನಾವು ಸಿದ್ಧರಾಗೋಣ.