ಹಂಪಿ ವಿವಿಯ ಆಸ್ತಿಯನ್ನು ಮುಟ್ಟಬೇಡಿ

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಭೂಮಿಯನ್ನು ಖಾಸಗಿ ಟ್ರಸ್ಟಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ನಿರ್ಣಯಕ್ಕೆ ಪ್ರತಿಕ್ರಿಯೆ (ದಿನಾಂಕ ಫೆಬ್ರವರಿ 22, 2010)
[dropcap]ಹಂ[/dropcap]ಪಿಯ ಕನ್ನಡ ವಿಶ್ವವಿದ್ಯಾನಿಲಯದ ಉಪಯೋಗಕ್ಕೆ ಹಾಗೂ ಚಟುವಟಿಕೆಗಳ ವಿಸ್ತರಣೆಗೆ ಹಿಂದೆ ಸರಕಾರವು ನೀಡಿದ್ದ 700 ಎಕ್ರೆ ಭೂಮಿಯಿಂದ 80 ಎಕ್ರೆ ಯನ್ನು ಕತ್ತರಿಸಿ ಕೃಷ್ಣದೇವರಾಯರ ಹೆಸರಿನಲ್ಲಿ ರಚಿಸಲಾದ ಯಾವುದೋ ಒಂದು ಟ್ರಸ್ಟಿಗೆ ಕೊಡಲಾದುದು ಖಂಡನಾರ್ಹವಾಗಿದೆ.
ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷದ ಉತ್ಸವಕ್ಕೆಂದು ಸರಕಾರದ ಬೊಕ್ಕಸದಿಂದ 13 ಕೋಟಿ ರೂ.ಗಳನ್ನು ವೆಚ್ಹ ಮಾಡುವುದಾಗಿ ಈಗ ಕೆಳದಿನಗಳ ಹಿಂದೆ ಸರಕಾರವು ಘೋಷಿಸಿತ್ತು. ಅದೇ ಅನಗತ್ಯ ಎಂದು ಟೀಕೆಗಳು ಬಂದಿರುವಾಗ ನಿಜವಾಗಿ 75 ಕೋಟಿ ರೂ.ಗಳಷ್ಟು ಹಣವನ್ನು ಅದಕ್ಕೋಸ್ಕರ ಖರ್ಚುಮಾಡಲಾಗಿದೆ ಎಂದು ಈಗ ಬಯಲಾಗಿದೆ. ಇದು ಸರಕಾರಿ ಬೊಕ್ಕಸವನ್ನು ದೋಚುವ ಯಾವುದೋ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವ ದುರ್ವ್ಯವಹಾರವೆಂದೇ ಹೇಳಬೇಕಾಗುತ್ತದೆ. ಅದರ ನಡುವೆ ಹಂಪಿಯಲ್ಲೇ ಇರುವ ವಿಶ್ವವಿದ್ಯಾಲಯದ ಆಸ್ತಿಯನ್ನು ಸಹಾ ಕಬಳಿಸಲು ಸರಕಾರವು ಹೊರಟಿರುವುದು ತೀರಾ ಅಕ್ಷೇಪಾರ್ಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರು ಮತ್ತು ವಿಚಾರವಂತ ಸಾಹಿತಿಗಳು ಈ ದುರ್ವ್ಯವಹಾರವನ್ನು  ಖಂಡಿಸಿರುವುದು ವರದಿಯಾಗಿದೆ. ರಾಜ್ಯದ ಯಾವ ವಿ.ವಿ.ನಿಲಯವಾಗಲಿ ಅನುದಾನಿತ ಭೂಮಿ ಹೊಂದಿರುವ ಸಂಸ್ಥೆಯಾಗಲಿ, ಇಂತಹ ಕಬಳಿಕೆಗೆ ಸರಕಾರ ಕೈ ಹಾಕಬಾರದು ಎಂದು ಈಗಾಗಲೆ ಒತ್ತಾಯ ಹೇರಲು ಆರಂಭಿಸಿವೆ. ಆದುದರಿಂದ ಈ ವ್ಯವಹಾರವನ್ನು ಈಗಿಂದೀಗಲೇ ಕೈ ಬಿಡಬೇಕೆಂದು ರಾಜ್ಯಸರಕಾರವನ್ನು ಒಬ್ಬ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ ಮತ್ತು ಪ್ರಜ್ಞಾವಂತ  ನಾಗರಿಕನೆಂಬ ನೆಲೆಯಲ್ಲಿ ನಾನು ಒತ್ತಾಯಿಸುತ್ತೇನೆ.