47ರ ಸ್ವಾತಂತ್ರ್ಯ

63ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಆಗಸ್ಟ್ 13, 2010)

[dropcap]ನ[/dropcap]ಮ್ಮ 63ನೆಯ ಸ್ವಾತಂತ್ರ್ಯ ದಿನಾಚರಣೆ ಇದೇ ಆಗಸ್ಟ್ 15ನೇ ತಾರೀಕಿಗೆ ಜರಗುತ್ತದೆ. ‘ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯ’  ಎಂದು ದಲಿತ ಕವಿ ಸಿದ್ದಲಿಂಗಯ್ಯನವರು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಕಂಡು ರೋಸಿ ಹೋಗಿ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೀಗ ಎಲ್ಲಿಯೇ ಇರಲಿ ಯಾರ ಕೊಡೆಯೊಳಗೇ ಸೇರಿಕೊಳ್ಳಲಿ ನಮ್ಮನ್ನು ಆಳುವವರು ಆ ಪ್ರಶ್ನೆಗೆ ವಕ್ರ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್, ಭಾಜಪ, ಮತ್ತು ಸಂಘಪರಿವಾರಗಳ ಸಂದರ್ಭ ಸಾಧಕ ಎಡ ಬಿಡಂಗಿಗಳು, ವಿವಿಧ ಕೋಮುವಾದಿಗಳು ಎಲ್ಲರೂ 1947 ಆ 15 ರಂದು ದೊರಕಿದ ಸ್ವಾತಂತ್ರ್ಯವನ್ನು ವಿಕೃತಗೊಳಿಸಿದ್ದಾರೆ.   ಭವಿತವ್ಯದೊಂದಿಗೆ ಮುಖಾಮುಖಿ ಎಂಬ ಇತಿಹಾಸ ಪ್ರಸಿದ್ಧ ಭಾಷಣದೊಂದಿಗೆ ಜವಾಹರಲಾಲ್ ನೆಹರೂ ರವರು ಆರಂಭಿಸಿದ ಎಲ್ಲ ಪ್ರಗತಿಪರ ಭವಿಷತ್ತನ್ನು ನಿಜಗೊಳಿಸುವತ್ತಣ ಮೊದಲ ಹೆಜ್ಜೆಗಳನ್ನು ತ್ಯಜಿಸಿ ನಮ್ಮನ್ನು ಆಳುವವರು ನಮ್ಮ ದೇಶವನ್ನು  ಪರಾಧೀನಕ್ಕೆ, ದಾರಿದ್ರ್ಯಕ್ಕೆ ಮತ್ತು ಸರ್ವಾಧಿಕಾರಕ್ಕೆ ಗುರಿಪಡಿಸುವ ದಾರಿಯಲ್ಲಿ ಮುನ್ನುಗ್ಗುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ಗುರಿಯನ್ನು ಸಾಧಿಸುವತ್ತ ಹೇಗೆ ಸಫಲವಾದ  ಹೆಜ್ಜೆಗಳನ್ನು ಮುಂದಿಡಬಹುದು ಎನ್ನುವುದನ್ನು ಕಮ್ಯುನಿಸ್ಟ್ ಮತ್ತು ಅವರ ಜೊತೆಗಾರರಾದ ಎಡ ಶಕ್ತಿಗಳು ಕಾರ್ಯಥಾ ತೋರಿಸಿಕೊಟ್ಟಿದ್ದಾರೆ. ಈ ಎರಡರ ನಡುವಿನ ಆಯ್ಕೆ ಇಂದು ನಮ್ಮ ಅನುಭವಸ್ಥ ಮತ್ತು ಪ್ರಭುದ್ದ ಜನತೆಯ ಕೈಯಲ್ಲಿದೆ.

ದೇಶಾದ್ಯಂತ ಲಕ್ಷಾಂತರ ರೈತರ ಆತ್ಮಹತ್ಯೆ ಎಂದು ಕರೆಯಲಾಗುವುದರಲ್ಲಿ ನಿಜಾರ್ಥದಲ್ಲಿ ಆಡಳಿತಗಾರರು ನಡೆಸುವ ಮಾನವ ಸಂಪತ್ತಿನ ಕೊಲೆಯ ಮತ್ತು ಪೀಡನೆಯ ಚಿತ್ರಣ ಕಂಡುಬರುತ್ತಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ, ಸಾಮ್ರಾಜ್ಯವಾದಿಗಳ ಆರ್ಥಿಕ ಶಕ್ತಿಯ ವರ್ಧನೆಗೆ ಕಾರಣವಾಗಿರುವ ಉದಾರೀಕರಣ, ಜಾಗತೀಕರಣ, ಖಾಸಗೀಕರಣಗಳನ್ನು ನಮ್ಮ ದೇಶವನ್ನು ಆಳುವ ನಮ್ಮ ಈಗಿನ ಪ್ರಭುತ್ವವಾದಿಗಳು ತೀವ್ರಗಳಿಸುತ್ತಿದ್ದಾರೆ. ಇದನ್ನು ಕೊನೆಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಈ ಸಮಸ್ಯೆಗಳಿಗೆ ಉತ್ತರ ಒಂದೇ: ಸಾಮ್ರಾಜ್ಯವಾದಿಗಳ, ಬಹು ರಾಷ್ಟ್ರೀಯ ಸಂಸ್ಥೆಗಳ ಪರವಾಗಿರುವವರನ್ನು ಅಧಿಕಾರದಿಂದ ತೊಲಗಿಸುವ ‘2ನೆಯ ಕ್ವಿಟ್ ಇಂಡಿಯಾ’ – ಅಧಿಕಾರ ಬಿಟ್ಟು ತೊಲಗಿ – ಎಂಬ ಹೊಸ ಚಳುವಳಿಗೆ ಎಲ್ಲ ದೇಶ ಪ್ರೇಮಿಗಳು,  ಜನಪರ ಶಕ್ತಿಗಳು, ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು ಒಟ್ಟಿನಲ್ಲಿ ಸಮಸ್ತ ಜನರು ಒಂದಾಗಿ ಹೋರಾಟ ರೂಪಿಸಬೇಕಾಗಿದೆ. ಈ ಹೋರಾಟದ ಆರಂಭಕ್ಕೆ ಇಂದು ದೇಶದ ಸಂಸತ್ತಿನಲ್ಲಿ ಮತ್ತು ಗುಜರಾತ್, ಕರ್ನಾಟಕ, ಪ.ಬಂಗಾಲ, ಮೊದಲಾದ ಪ್ರಜಾಪ್ರಭುತ್ವದ ದೇಗುಲಗಳಲ್ಲಿ ನಡೆಯುತ್ತಿರುವ ಗೊಂದಲಗಳನ್ನು ಉದಾಹರಣೆಗಳಾಗಿ ನಾವು ಕಂಡು ತಿಳಿಯಬೇಕಾಗಿದೆ.

ಬೆಲೆ ಏರಿಕೆಯ ಪ್ರಶ್ನೆ ಸಮಸ್ತ ಜನತೆಯನ್ನು ಕಾಡುತ್ತಿರುವಾಗ ವಿವಿಧ ಪಕ್ಷಗಳು ಬೆಲೆ ಏರಿಕೆಯ ಮುಂದುವರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಹತ್ತು ಹಲವು ಸೂಚನೆಗಳನ್ನು ಸರಕಾರದ ಮುಂದಿಟ್ಟು ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ಮನಮೋಹನ್ ಸಿಂಗ್ ಹಾಗೂ ಅವರನ್ನು ಬೆಂಬಲಿಸುವ ಆಳುವ ಒಕ್ಕೂಟವು ಪ್ರತಿಪಕ್ಷಗಳೊಳಗಿನ ಭಿನ್ನಾಭಿಪ್ರಾಯವನ್ನು ಲೇವಡಿ ಮಾಡಿ ತಲೆ ತಪ್ಪಿಸಿಕೊಳ್ಳುವ ಮಾರ್ಗ ಹಿಡಿದಿರುವುದು ಪ್ರಜಾತಂತ್ರದ ಲೇವಡಿಯಲ್ಲದೆ ಮತ್ತೇನಲ್ಲ. ಸಂಸತ್ತಿನಲ್ಲಿ ಚರ್ಚೆ ಮಾಡಿ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಸಂಸತ್ತನ್ನೇ ಕಡೆಗಾಣಿಸಿ ತೈಲೋತ್ಪನ್ನಗಳ ಬೆಲೆಯನ್ನು ಮತ್ತೆ ಏರಿಸಿರುವುದು ಅಕ್ಷಮ್ಯವಾಗಿದೆ.

ನಮ್ಮ ರಾಜ್ಯದಲ್ಲಿ ನೋಡಿದರೆ ವಿಧಾನ ಮಂಡಲದಲ್ಲಿ ಗಣಿಗಾರಿಕೆ ಮತ್ತಿತರ ಬಹಿರಂಗಗೊಂಡಿರುವ ಭ್ರಷ್ಟಾಚಾರಗಳ ಬಗ್ಗೆ ಮತ್ತು ಲೋಕಾಯುಕ್ತರ ದಿಟ್ಟ ಕ್ರಮಗಳ ಬಗ್ಗೆ  ಚರ್ಚಿಸಿ ಭ್ರಷ್ಟ ಮಂತ್ರಿವರ್ಯರೊಳಗೊಂಡ ಅಧಿಕಾರಿಗಳನ್ನು ಶಿಕ್ಷಿಸುವುದರ ಬದಲು ಆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಕ್ರಮಗಳು ನಡೆದುವು. ಹಿಂದೆ ಆಳುತ್ತಿದ್ದವರು, ಈಗ ಆಳುತ್ತಿರುವವರು ಕೊಳ್ಳೆ ಹೊಡೆಯುವ ಭ್ರಷ್ಟಾಚಾರಕ್ಕೆ ವಿರುದ್ದವಾಗಿ ಯಾವ ಹೆಜ್ಜೆಯನ್ನೂ ಇರಿಸದೆ ಇದೀಗ ಪಾದ ಯಾತ್ರೆ, ಸಮಾವೇಶ, ಅತ್ತಿತ್ತ ಕೆಸರಾಟಗಳಲ್ಲಿ ಎರಡೂ ಕಡೆಯ ವರಿಷ್ಟರು ಭಾಗವಹಿಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಕೇಂದ್ರ ಸರಕಾರವು ಸಹಾ ಸಂಪತ್ತಿನ ಕೊಳ್ಳೆ ಹಾಗೂ ಭೂಮಿ, ಜನ ಅರಣ್ಯಗಳನ್ನೆಲ್ಲ ದೋಚಿ ತಮ್ಮದಾಗಿಸಿಕೊಳ್ಳುವವರ ವಿರುದ್ದ ಕ್ರಮವಹಿಸುವ ಬದಲಾಗಿ ತೋರಿಕೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಥಾ ಕಿರುಬೆರಳನ್ನೂ ಎತ್ತದಿರುವ ಸೋಗಲಾಡಿತನವನ್ನು ತೋರಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಲೋಕಾಯುಕ್ತರು, ರಾಜ್ಯಪಾಲರು, ಬುದ್ಧಿ ಜೀವಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಉಳ್ಳ ಪ್ರಮುಖರು ಎಲ್ಲರೂ ಈ ಹಗರಣದ ವಿರುದ್ದ ಧ್ವನಿ ಎತ್ತಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಆ 15, 2010 ರಂದು ಕೆಂಪು ಕೋಟೆಯ ಸ್ವಾತಂತ್ರ್ಯ ಸಮಾರಂಭದ ಕಟಕಟೆಯಲ್ಲಿ ಅಶೋಕ ಚಕ್ರ ಹೊತ್ತ ತ್ರಿವರ್ಣ ದ್ವಜ ಅರಳುತ್ತದೆ. ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   .. ಜನ ಗಣ ಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   ..’ ರಾಷ್ಟಗೀತೆ ಮೊಳಗುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಅಪ ಸಾಧನೆಗಳನ್ನು ಬಚ್ಚಿಟ್ಟು ಸಾಧನೆಗಳ ಕನಸುಗಳನ್ನು ಬಿತ್ತರಿಸುತ್ತಾರೆ. ಅದೇ ಸಮಯದಲ್ಲಿ ಕರ್ನಾಟಕ, ಗುಜರಾತ್ ಹಾಗೂ ಇನ್ನಿತರ ರಾಜ್ಯಗಳ ರಾಜಧಾನಿಗಳಲ್ಲಿ ಅದೇ ಬಾವುಟ, ಅದೇ ರಾಷ್ಟ್ರಗೀತೆ ಮೊಳಗಿದರೂ ಕೆಳಗೆ ನಿಂತು ಧ್ವಜ ವಂದನೆ ಸ್ವೀಕರಿಸುವವರು ಅವುಗಳನ್ನು ಕಾರ್ಯಥಾ ಗೌರವಿಸದೆ ಇರುವುದು ನಮ್ಮ ದುರಂತ. ಮೊದಲನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ವಸಾಹತುಶಾಹಿ ಆಡಳಿತದ ವ್ಯವಸ್ಥೆಯ ಸಂಪೂರ್ಣ ನಿರ್ಮೂಲನೆ, ಸ್ವಾವಲಂಬನೆ, ಔಧ್ಯಮೀಕರಣ, ವೈಜ್ಞಾನಿಕ ಶಿಕ್ಷಣದ ವ್ಯವಸ್ಥೆ, ಭೂಸುಧಾರಣೆ, ರಾಜ ನವಾಬರುಗಳ ಆಡಳಿತ ಮತ್ತು ರಾಜಧನ ರದ್ದತಿ, ಜೀವ ವಿಮೆಗಳ ರಾಷ್ಟ್ರೀಕರಣ, ಉಳುವವನಿಗೆ ಕೃಷಿ ಭೂಮಿ ಮತ್ತು ಕೃಷಿಗೆ ಆಧ್ಯತೆಯ ನೆಲೆಯಲ್ಲಿ ಸಹಾಯ, ಕೃಷಿ ಉತ್ಪನ್ನಗಳಿಗೆ ಸುವ್ಯಸ್ಥಿತ ಮಾರುಕಟ್ಟೆ ಮತ್ತು ಲಾಭದಾಯಕ ಬೆಲೆ, ಉತ್ತಮ ಗೊಬ್ಬರಗಳ ಪೂರೈಕೆ, ವಿದ್ಯುತ್ ಶಕ್ತಿ ಮತ್ತು ನೀರಾವರಿ ಸೌಲಬ್ಯಗಳ ವಿಸ್ತರಣೆ, ದುಡಿವ ಜನರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೈಜ್ಞಾನಿಕ ಶಿಕ್ಷಣ, ವಿದ್ಯಾಸಂಸ್ಥೆಗಳನ್ನು ಧಾರ್ಮಿಕ ಹಾಗೂ ಲಾಭಬಡುಕ ಖಾಸಗಿಯವರ ಕಪಿ ಮುಷ್ಟಿಯಿಂದ ಬಿಡಿಸಿ ಅರ್ಹತೆಯ ಆಧಾರದಲ್ಲಿ ಶಿಕ್ಷಣದ ವ್ಯವಸ್ಥೆ, ಇತ್ಯಾದಿಗಳ ಗುರಿಯನ್ನು ಇಟ್ಟುಕೊಂಡು ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈಗ ಅವುಗಳನ್ನು ಸಂಪೂರ್ಣವಾಗಿ ತೊರೆದು ದುಡಿದು ತಿನ್ನುವ ಬಹು ಸಂಖ್ಯಾತ ಜನರ ದಾರಿದ್ರ್ಯಕ್ಕೆ ಗುರಿಪಡಿಸುವ ದಾರಿಯಲ್ಲಿ ಆಳುವವರು  ಸಾಗುತ್ತಿರುವುದನ್ನು ನಾವಿಂದು ಕಾಣುತ್ತೇವೆ.

ಪರಮಾಣು ಅಸ್ತ್ರದ ಕೊಡೆಹಿಡಿಯುವ ಟೊಳ್ಳು ಆಸ್ವಾಸನೆಗೆ ಮರುಳಾಗಿ ದೇಶದ ವಿದೇಶಾಂಗ ನೀತಿಯ ಅಪಾಯಕಾರಿ ಬದಲಾವಣೆಗಳನ್ನು ತರಲು ಪಡುವ ಪ್ರಯತ್ನವನ್ನಂತೂ ಕೊನೆಗಾಣಿಸಬೇಕೆಂದು ಭವಿಷತ್ತಿನ ಬಗ್ಗೆ ಕಾಳಜಿ ಇರುವವರೆಲ್ಲರೂ ಅಪೇಕ್ಷಿಸುತ್ತಾರೆ. ಇದಕ್ಕೆ ನಮ್ಮ ಸಂಸತ್ತು ಮತ್ತು ವಿಧಾನ ಸಭೆಗಳು ಬದಲಾಗಬೇಕು. ಕೋಟ್ಯಾಧಿಪತಿಗಳು, ಭೂಕಬಳಿಕೆದಾರರು, ಗಣಿಗಳ್ಳರು, ಅರಣ್ಯ ಲೂಟಿಗಾರರು ಮತ್ತು ಅವರ ಪ್ರತಿನಿಧಿಗಳು ಅವುಗಳಲ್ಲಿ ತುಂಬಿಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಬಹುಸಂಖ್ಯಾತ ದುಡಿದು ತಿನ್ನುವ ಜನರ ಬದುಕು ದುಸ್ತರವಾಗುತ್ತಿದೆ. ಈ ವೈಪರೀತ್ಯಗಳನ್ನು ಕೊನೆಗಾಣಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಒಂದುಗೂಡಿ ಸಮಾಲೋಚನೆ ಮಾಡಿ ಒಂದು ಹೊಸ ಅಭಿಯಾನ ಆರಂಭಿಸುವತ್ತ ಹೆಜ್ಜೆ ಇಡುವ ಪ್ರತಿಜ್ಞೆ ಮಾಡೋಣ ಮತ್ತು ಅದಕ್ಕೆ ಕಾರ್ಯ ಸಿದ್ದತೆ ನಡೆಸೋಣ.