ಬೀದಿ ನಾಯಿಗಳ ಕಾಟ

[dropcap]ಬೆಂ[/dropcap]ಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯೊಳಗೆ ಮಾನವರಿಗಿಲ್ಲದ ರಕ್ಷಣೆಯನ್ನು ಬೀದಿ ನಾಯಿಗಳಿಗೆ ಪ್ರಾಣಿದಯೆಯ ಹೆಸರಲ್ಲಿ ನಗರಾಡಳಿತವು ನೀಡುತ್ತಿರುವುದು ಕೂಲಿನಾಲಿ ಮಾಡಿಕೊಂಡು ಬದುಕುತ್ತಿರುವ ಕಡು ಬಡವರ ಪಾಲಿಗೆ ಮಾರಕವಾಗಿದೆ. ಇವರ ಮಕ್ಕಳಿಗೆ ಯಾರ ದಯೆಯೂ ಇಲ್ಲ, ಯಾರ ರಕ್ಷಣೆಯೂ ಇಲ್ಲ, ಯಾರ ಪೋಷಣೆಯೂ ಇಲ್ಲ ಎಂದಾಗಿರುವುದು ಆಡಳಿತದ ಧೋರಣೆಯ ಪರಿಣಾಮವಾಗಿದೆ. ಹಳ್ಳಿಗಾಡುಗಳಿಂದ ಹೊಟ್ಟೆಹೊರೆಯಲು ನಗರ ವ್ಯಾಪ್ತಿಯೊಳಗೆ ಬಂದು ಕೂಲಿ ನಾಲಿಯ ಕೆಲಸ ಮಾಡಿಕೊಂಡು ಅಂಗಡಿ ಮುಂಗ್ಗಟ್ಟುಗಳಲ್ಲಿಯೋ ರಸ್ತೆ ಬದಿಗಳಲ್ಲಿಯೋ ಅರೆ ಬರೆ ನಿರ್ಮಾಣವಾಗಿರುವ ಕಟ್ಟಡಗಳ ಇಟ್ಟಿಗೆ ರಾಶಿಗಳೊಳಗೋ ಆಶ್ರಯ ಪಡೆಯುವ ಬಡ ಕೂಲಿ ಕಾರ್ಮಿಕರು ಬೀದಿ ನಾಯಿಗಳ ಕಾಟಗಳಿಗೆ ಬಲಿಯಾಗುತ್ತಿದ್ದಾರೆ, ಅವರ ಹಸುಳೆಗಳನ್ನು ನಾಯಿಗಳು ಎಳೆದೊಯ್ದು ಭಕ್ಷಿಸುತ್ತವೆ. ಇದೇ ಜನೆವರಿ 19ರ ವರದಿಯಂತೆ ಕೆಲವು ನಾಯಿಗಳು ಯಲಹಂಕ ಶಾಲೆಯೊಂದರ ಒಳ ಹೊಕ್ಕು ಅಲ್ಲಿದ್ದ ಕೆಲವು ವಿದ್ಯಾರ್ಥಿಗಳನ್ನೂ  ಶಿಕ್ಷಕರನ್ನೂ ಕಚ್ಚಿ ಘಾಸಿಗೊಳಿಸಿವೆ. ಇಂತಹ ವರದಿಗಳು ಪದೇ ಪದೇ ಪ್ರಕಟವಾಗುತ್ತಲೇ ಇರುತ್ತವೆ. ಜನರು ಪ್ರತಿಭಟನೆ ನಡೆಸಿ ನಗರ ಪಾಲಿಕೆಗೆ ಛೀಮಾರಿ ಹಾಕಿ ತಣ್ಣಗಾಗುತ್ತಾರೆ. ಆದರೆ ಇಂತಹ ಅರಕ್ಷಿತ ಸ್ಥಿತಿಯನ್ನು ಕೊನೆಗಾಣಿಸಲು ಕೈಗೊಳ್ಳುವ ಕ್ರಮಗಳಾವುವೂ ಕಳೆದ ಕೆಲವು ವರ್ಷಗಳಿಂದ ನಮಗೆ ಕಾಣುತ್ತಿಲ್ಲ. ಶ್ರೀಮತಿ ಮೇನಕಾ ಗಾಂಧಿಯವರ ಕಾರುಬಾರಿನಲ್ಲಿ ಅನುಷ್ಠಾನಗೊಂಡ ಬೀದಿ ನಾಯಿಗಳ ಪ್ರಾಣಿ ದಯೆಯ ಕಾನೂನಿನಡಿಯಲ್ಲಿ, ಮಾನವರ ಪಾಲಿಗೆ ಕನಿಷ್ಠ ರಕ್ಷಣೆಯನ್ನೂ, ದುಡಿದು ಬದುಕುವ ಹಕ್ಕನ್ನೂ ಕೊಡಲಾಗದ ನಮ್ಮ ರಾಜ್ಯದಲ್ಲಿ ಬೀದಿ ನಾಯಿಗಳ ಮೇಲೆ ಪ್ರೀತಿ, ಮಮಕಾರವನ್ನು ತೋರಲು ಆಳುವವರು ಗುತ್ತಿಗೆದಾರರನ್ನು ನೇಮಿಸಿ ಅವರನ್ನು ಕೊಬ್ಬಿಸಿ ತಮ್ಮ ಪಾಲನ್ನು ದೃಢೀಕರಿಸಿ ಸಂತುಷ್ಠರಾಗಿರುತ್ತಾರೆ.

ಈಗ ಹೇಗೂ ಮೇನಕಾ ಗಾಂಧಿಯವರನ್ನು ಜನರು ಅಧಿಕಾರದಿಂದ ತೊಲಗಿಸಿದ್ದಾರೆ. ಅವರ ಸುಪುತ್ರನೂ ಮೂಲೆ ಗುಂಪಾಗಿದ್ದಾನೆ. ಆದರೆ ಅವರು ರೂಪಿಸಿದ ಕಾನೂನಿನ ಲಾಭ ಪಡೆಯಲು ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಮುಖ್ಯವಾಗಿ ರೇಬಿಸ್ ರೋಗದ ಚುಚ್ಚುಮದ್ದನ್ನು ಉತ್ಪಾದಿಸುವ  ಕಂಪೆನಿಗಳು ಹವಣಿಸುತ್ತಿದ್ದಾರೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾದಂತೆ ವರ್ಷವೊಂದರಲ್ಲಿ ಲಕ್ಷಾಂತರ ಮಂದಿ ಹುಚ್ಚು ನಾಯಿ ಕಡಿತಕ್ಕೊಳಗಾಗುತ್ತಾರೆ. ತಮ್ಮ ದಂಧೆಯ ಶ್ರೇಯಸ್ಸಿಗಾಗಿ ಗಣಿ ಧಣಿ ಗಳಂತೆ ಲಾಬಿ ಮಾಡಿಕೊಂಡು ಆ ಕಂಪೆನಿಗಳು ಸಾಕಷ್ಟು ಹಣವನ್ನು ನಾಯಿ ಪ್ರಿಯ ಸಂಘ ಸಂಸ್ಥೆಗಳ ಮುಖಂಡರಿಗೆ ಒಪ್ಪಿಸುತ್ತಾರೆ. ನಾಯಿಗಳ ಸಂಖ್ಯೆ ಹೆಚ್ಚಿದಷ್ಠು ಅವರಿಗೆ ಲಾಭ ಹೆಚ್ಚುತ್ತದೆ. ಆದುದರಿಂದ ಅದರ  ಬಾಧಕಗಳೇನೇ ಇರಲಿ ಆ ಕಾನೂನನ್ನು ಬದಲಾಯಿಸದಂತೆ ಅವರು ಬಲವಾಗಿ ಪ್ರತಿಭಟಿಸುತ್ತಾರೆ. ಈಗಿನ ವ್ಯವಸ್ಥೆಯಂತೆ ಬೀದಿನಾಯಿಗಳನ್ನು ಹಿಡಿದು ಕೊಂಡೊಯ್ದು ಸಂತಾನ ಹರಣ ಚಿಕಿತ್ಸೆಗೈದು ಅದೇ ಜಾಗಕ್ಕೆ ಮರಳಿ ಬಿಡಲಾಗುವುದು. ಅವರ ಲೆಕ್ಕಾಚಾರ ಪ್ರಕಾರ ಅವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಕೊನೆಗೆ ಶೂನ್ಯವಾಗಬೇಕು. ಆದರೆ ಈಗಿನ ಅನುಭವದ ಪ್ರಕಾರ ಮತ್ತು ಅಧಿಕಾರಿಗಳೇ ಇತ್ತೀಚೆಗೆ ಕೊಟ್ಟ ಲೆಕ್ಕದ ಪ್ರಕಾರ ಅವುಗಳ ಸಂಖ್ಯೆ ದಿನೇ ದಿನೇ ಅಧಿಕಗೊಳ್ಳುತ್ತಾ  ದ್ವಿಗುಣ ಗೊಂಡಿದೆಯಂತೆ. ಜನರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದರೂ ನಾಯಿಗಳು ಬಲಿಷ್ಠಗೊಂಡು  ಸಂಖ್ಯೆಯಲ್ಲಿ ಅಧಿಕಗೊಳ್ಳುತ್ತಾ ಜನಸಾಮಾನ್ಯರಿಗೆ, ಮುಖ್ಯವಾಗಿ ದುರ್ಬಲ ವರ್ಗದ ಕೂಲಿ ಕಾರ್ಮಿಕರಿಗೆ, ದುಸ್ವಪ್ನವಾಗಿ ಕಾಡುತ್ತಿವೆ. ಅವುಗಳಿಂದಾಗಿ ಹಲವಾರು ದುರ್ಘಟನೆಗಳು ಸಂಭವಿಸಿದವು, ಕೆಲವು ಜೀವಗಳು ಬಲಿಯಾದವು. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತು ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ. ಯಾವುದೋ ಕಾರಣ ಹುಡುಕಿ ಯಾರ ಮೇಲೆಯೋ ಗೂಬೆ ಕೂರಿಸುವುದು ಬೇಡ. ನಾಯಿಗಳ ಜೀವ ಅಮೂಲ್ಯವಲ್ಲ. ಅದೂ ಒಂದು ಪ್ರಾಣಿ ಅಷ್ಟೇ. ಪ್ರಾಣಿ ಹಿಂಸೆ ಮಾಡುವುದು ಬೇಡ. ಆದರೆ ಅವುಗಳಿಗಿಂತ ಮನುಷ್ಯರ ಜೀವ ಅಮೂಲ್ಯ ಅವರ ಬದುಕುವ ಮತ್ತು ದುಡಿಯುವ ಹಕ್ಕುಗಳನ್ನು ಗೌರವಿಸ ಬೇಕಿದೆ. ಐಷರಾಮಿ ಬದುಕು ನಡೆಸುತ್ತಿರುವ ಮತ್ತು  ತಮ್ಮ ಮೋಜಿಗೆ ಸಂಘಗಳನ್ನು ಕಟ್ಟಿಕೊಂಡಿರುವ ಪ್ರಾಣಿದಯಾ ಸಂಘದವರಿಗೆ ಬಾಗಿಲು ರಹಿತ ಕೊಂಪೆಗಳಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರ ಬವಣೆ ಅರ್ಥವಾಗದು  ತಮಗಿರುವ ಪ್ರಾಣಿದಯೆ ಯನ್ನು ಕಾರ್ಯ ರೂಪಕ್ಕೆ ತರುವ ಜವಾಬ್ದಾರಿ ತಮಗೆ ಇದೆ ಎಂದು ಭಾವಿಸುವುದಾದರೆ ತಮ್ಮ ಸಂಘದ ಮೂಲಕ ತಮ್ಮದೇ ಒಂದು ನಿವೇಶನವನ್ನು ನಿರ್ಮಿಸಿ ಸಾಧ್ಯವಾದಷ್ಟು ಸಂಖ್ಯೆಯ ನಾಯಿಗಳನ್ನು ದತ್ತು ಪಡೆದು ತಮ್ಮ ಅಧೀನದಲ್ಲಿರಿಸಿ ಸಾಕಲಿ. ಮಿಕ್ಕವುಗಳನ್ನು ದಯಾ ಮರಣಕ್ಕೆ ಒಳಪಡಿಸಲಿ.  ಎಷ್ಟು ಮಾತ್ರಕ್ಕೂ ಬೀದಿಗಳಲ್ಲಿ ನಾಯಿಗಳನ್ನು ಬಿಡುವುದನ್ನು ವಿರೋಧಿಸಬೇಕಾಗುತ್ತದೆ.