Jan 29
ಮಾನ್ಯ ಗೃಹ ಸಚಿವ ಆಚಾರ್ಯರವರಿಗೆ ಒಂದು ಕಿವಿ ಮಾತು.
Jan 28
ಉತ್ಸವಗಳ ಅಬ್ಬರಕ್ಕಿಂತ ಅವಶ್ಯಕತೆಗಳ ಈಡೇರಿಕೆಗೆ ಸರಕಾರ ಗಮನ ಹರಿಸಲಿ: ಸರಕಾರಿ ಖಜಾನೆ ದೇಶದ ಆಸ್ತಿ, ಖಾಸಗಿ ಸೊತ್ತು ಅಲ್ಲ.
ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ: 28 ಜನವರಿ 2010)
ಇಂದು ಕರ್ನಾಟಕದಲ್ಲಿ ದಿನನಿತ್ಯ ಒಂದಲ್ಲ ಒಂದು ಊರಲ್ಲಿ ಒಂದಲ್ಲ ಒಂದು ಹೆಸರಲ್ಲಿ ಜನಮರುಳೋ ಜಾತ್ರೆ ಮರುಳೋ ಎಂಬಂಥ ನಿತ್ಯೋತ್ಸವಗಳು ನಡೆಯುತ್ತಿರುತ್ತವೆ. ಈ ಅಬ್ಬರಗಳು ನಿತ್ಯೋತ್ಸವ ತಾಯೇ ನಿತ್ಯೋತ್ಸವ ಎಂದು ನಿಸ್ಸಾರ್ ಅಹ್ಮ್ದ್ರವರು ಎದೆ ತುಂಬಿ ಹಾಡಿರುವ ಕನ್ನಡ ನಾಡಿನ ಸಹಜ ನಿತ್ಯೋತ್ಸವಗಳಲ್ಲ. ಈ ನಿತ್ಯೋತ್ಸವಗಳು ಅಧಿಕಾರ ಗಳಿಸಲಿಕ್ಕೆ ಮತ್ತು ತಮ್ಮ ಸ್ಥಾಪಿತ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವುದಕ್ಕೆ ಆಳುವವರು ಸರಕಾರಿ ವೆಚ್ಚದಲ್ಲಿ ನಡೆಸುವಂಥಹ ಕೃತಕ ಉತ್ಸವಗಳಾಗಿವೆ. ಈ ಉತ್ಸವಗಳು ನಿಜವಾಗಿ ಹಿಂದೆ ಎಂದೋ ಒಂದು ಕಾಲದಲ್ಲಿ ಇದ್ದಂತಹ ಗತ ವೈಭವಗಳೆಂಬ ಬರೇ ಕಲ್ಪನೆಗಳ ಕೃತಕ ಮನರಂಜನೆಯ ಆಡಂಬರಗಳಾಗಿವೆ. ಉಜಿರೆಯ ತುಳುವರ ಉತ್ಸವ ಎಂಬ ಹೆಸರಲ್ಲಿ ವರ್ಣಭೇಧ, ಜಾತಿ ಬೇಧ, ಶ್ರೀಮಂತಿಕೆಯ ಕಾಲ್ಪನಿಕ ವೈಭವ ಇವುಗಳ ಪ್ರದರ್ಶನ ನಡೆಯಿತು. ಅದಕ್ಕೆ ಸರಕಾರದ ಬೊಕ್ಕಸದಿಂದ ನಮಗೆ ಗೊತ್ತಿರುವಂತೆ ಒಂದು ಕೋಟಿ ರೂ. ದೇಣಿಗೆ ಸಂದಿತು. ಅದರ ಮರುದಿನವೇ ಉಡುಪಿಯಲ್ಲಿ ಹಿಂದೂ ಧರ್ಮದ ಒಂದು ಪಂಥದ ಪ್ರಚಾರಕ್ಕೋಸ್ಕರ ನಡೆಯುವ ಪರ್ಯಾಯ ಉತ್ಸವಕ್ಕೆ ಧರ್ಮ ನಿರಪೇಕ್ಷ ಪ್ರಭುತ್ವ ಎಂದುಕೊಳ್ಳುವ ಸರಕಾರದ ಖಜಾನೆಯಿಂದ ಐದು ಕೊಟಿಯಷ್ಟು ಸಂದಿತು ಮತ್ತು ಐವತ್ತು ಕೋಟಿಯ ದೇಣಿಗೆಯ ಭರವಸೆ ಪ್ರಕಟವಾಯ್ತು. ಅದು ಮುಗಿಯುವಷ್ಟರೊಳಗೆ ವಿಜಯನಗರ ಸಾಮ್ರಾಜ್ಯದ ಒಬ್ಬ ಧೀರ ಹಾಗೂ ಧೀಮಂತ ಅರಸನ ಪಟ್ಟಾಭಿಷೇಕದ 500 ವರ್ಷಗಳ ಪುನಾರಾವರ್ತನೆಯ ಉತ್ಸವಕ್ಕೆ ಪ್ರಕಟವಾಗಿರುವಂತೆ 13 ಕೋಟಿ ರೂ.ಗಳು ಸಂದಿವೆ. ಹಂಪಿಯ ಪುನರುಜ್ಜೀವನ ಮತ್ತು ಅಭಿವೃಧ್ದಿಗೆ ಮತ್ತು ಸ್ಮಾರಕಗಳ ಪುನರ್ನಿರ್ಮಾಣಕ್ಕೆ ಯೋಜನಾಬದ್ದವಾಗಿ ಆಗಬೇಕಾದ ಖರ್ಚು ಆಗುವುದರಲ್ಲಿ ಆಕ್ಷೇಪವಿಲ್ಲ. ಅವುಗಳು ಜನರ ಮತ್ತು ರಾಜ್ಯದ ಅಮೂಲ್ಯ ಸಾಂಸ್ಕೃತಿಕ ಸ್ಮರಣಿಕೆಗಳಾಗಿ ಉಳಿಯುತ್ತವೆ. ಆದರೆ ಶ್ರೀಕೃಷ್ಣ ದೇವರಾಯರು ಎಷ್ಟೇ ಸ್ಮರಣೀಯರಾದರೂ ಸಹಾ ಅವರ ಪಟ್ಟಾಭಿಶೇಕದ ಮಹೋತ್ಸವದ ಹೆಸರಲ್ಲಿ ಜನ ಜಾತ್ರೆ ನಡೆಸುವುದು ದುರ್ವ್ಯಯ ಅಲ್ಲದೆ ಮತ್ತೇನಲ್ಲ. ಹಳೆಯ ಕಾಲದ ಅನೇಕ ಅರಸೊತ್ತಿಗೆಗಳು, ಅರಸೊತ್ತಿಗೆಗಳ ಮೇಲಿನ ಸಾಮ್ರಾಜ್ಯಾಧಿಪತಿಗಳು ಕರ್ನಾಟಕದಲ್ಲಿ ಆಗಿ ಹೋಗಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ಯುರೋಪಿನ ವ್ಯಾಪಾರಿ ಬಂಡವಾಳಿಗರು ಭಾರತಕ್ಕೆ ಬಂದು ಇಲ್ಲಿನ ಆಳುವವರ ಒಳಜಗಳದಲ್ಲಿ ಒಳ ನುಸುಳಿ ಇಡೀ ದೇಶವನ್ನೇ ತಮ್ಮ ವಸಾಹತನ್ನಾಗಿ ಮಾರ್ಪಡಿಸಿದ್ದನ್ನು ಜ್ಞಾಪಿಸುವಾಗ ಗತಕಾಲದ ಸಾಮ್ರಾಜ್ಯಗಳ ವೈಭವವನ್ನು ಮೆರೆಸುವುದಕ್ಕಿಂತಲೂ ಅನ್ಯರ ಅಧಿಪತ್ಯಕ್ಕೆ ಈ ದೇಶವನ್ನು ಒಪ್ಪಿಸಿ ತಾವುಗಳು ಆಳರಸರಾಗಿ ರೂಪಾಂತರಗೊಂಡ ಕಥೆ ಆಡಂಬರದಿಂದ ಆಚರಿಸಬೇಕಾದದ್ದೇನಲ್ಲ. ಅದರ ಬದಲು ಇಲ್ಲಿನ ಉಳುಮೆದಾರರು, ಕುಶಲಕರ್ಮಿಗಳು, ಅರಣ್ಯವಾಸಿಗಳು, ಮೂಲನಿವಾಸಿಗಳು ತಮ್ಮ ನೆಲ, ಜಲ, ನೈಸರ್ಗಿಕ ಸಂಪತ್ತು, ಬದುಕು, ಬಾಳ್ವೆಗಳ ರಕ್ಷಣೆಗೋಸ್ಕರ ಹೋರಾಡಿದಂಥಹ ವೀರಗಾಥೆಯನ್ನು ನೆನಪಿಗೆ ತರುವ ಮಹತ್ಕಾರ್ಯಕ್ಕೆ ಸರಕಾರ ಪ್ರೋತ್ಸಾಹಿಸಿದರೆ ಮತ್ತು ಜನಜಾತ್ರೆ ಗಳನ್ನಾಚರಿಸಿದರೆ ಒಂದು ವೇಳೆ ಸಮಂಜಸವೆನಿಸಬಹುದೇನೋ.
ಸ್ವಾತಂತ್ರ್ಯ ಪಡೆದು ಗಣತಂತ್ರವಾಗಿ ರೂಪು ತಳೆದ ನಮ್ಮ ದೇಶದಲ್ಲಿ ಪರಾಧೀನತೆಯ ಹಾಗೂ ವೈವಿಧ್ಯತೆಗಳನ್ನು ವೈರುಧ್ಯಗಳಾಗಿ ಮಾರ್ಪಡಿಸುವ ಉದ್ದೇಶದಿಂದ ನಡೆಯುವ ಯಾವುದೇ ಜನಮರುಳು ಕಾರ್ಯಕ್ರಮಗಳು ದೇಶಕ್ಕೆ ದಾಸ್ಯವನ್ನು ಪುನ: ತಂದುಕೊಳ್ಳುವ ದೊಂಬರಾಟವಾಗುತ್ತದೆ ಎಂಬುದು ಅಧಿಕಾರದ ಲಾಲಸೆಯ ಆಳುವ ಪಕ್ಷಗಳಿಗೆ ಗೊತ್ತಿರಬೇಕು.
ಪ್ರತ್ಯೇಕವಾಗಿ 2010 ನೇ ವರ್ಷದ ಗಣತಂತ್ರೋತ್ಸವದ ಸಂದರ್ಭದಲ್ಲಿ ಆಳುವವರಿಂದ ನಾವು ಸಾಮಾನ್ಯ ಜನರು ನಿಜವಾಗಿ ನಿರೀಕ್ಷಿಸುವುದೇನೆಂದರೆ ನೈಸರ್ಗಿಕ ವಿಕೋಪಗಳಿಗೆ, ಅತಿವೃಷ್ಟಿ, ಅನಾವೃಷ್ಟಿ ಗಳಿಗೆ ಮುಖ್ಯವಾಗಿ ಕರ್ನಾಟಕದಲ್ಲಿ ನೆರೆ ಹಾವಳಿಗೆ ಗುರಿಯಾಗಿ ಅನಾಥ ಸ್ಥಿತಿಯನ್ನು ಅನುಭವಿಸುತ್ತಿರುವ ಜನರ ಕಣ್ಣೀರು ಒರಸುವ ಮತ್ತು ಜೀವ ಉಳಿಸುವ ಹಾಗೂ ಸಂಕಷ್ಟಗಳನ್ನು ನಿವಾರಣೆ ಮಾಡುವ ಯೋಜನೆಗಳನ್ನು ಈಗ ಎಷ್ಟು ಬೇಗ ಪೂರ್ತಿ ಗೊಳಿಸಲಿದ್ದೀರಿ ಎಂಬ ವಿವರಗಳನ್ನು ಸಾರ್ವಜನಿಕರ ಮುಂದೆ ಸಾಕ್ಷಾಧಾರಗಳ ಮತ್ತು ಅಂಕೆ-ಸಂಖ್ಯೆಗಳ ಮೂಲಕ ಪ್ರಕಟಿಸುವುದು ಇಂದಿನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಲು ಇಚ್ಹಿಸುತ್ತೇವೆ. ಆದು ಕೈಲಾಗದಿದ್ದರೆ ತೊಲಗಬೇಕಾಗುತ್ತದೆ ಅಥವಾ ತೊಲಗಿಸಬೇಕಾಗುತ್ತದೆ ಎಂಬ ಎಚ್ಹರಿಕೆಯ ಮಾತುಗಳನ್ನು ಹೇಳಿದರೆ ಕೋಪಿಸಿಕೊಳ್ಳಬಾರದು.
Mar 23
Felicitation to Sri B.V. Kakkilaya, Bangalore : : March 22, 2009 : ಬಿ ವಿ ಕಕ್ಕಿಲ್ಲಾಯರಿಗೆ ಸನ್ಮಾನ, ಬೆಂಗಳೂರು
Felicitation to Sri B.V. Kakkilaya, Bangalore, March 22, 2009 : ಬಿ ವಿ ಕಕ್ಕಿಲ್ಲಾಯರಿಗೆ ಸನ್ಮಾನ, ಬೆಂಗಳೂರು
[dropcap]N[/dropcap]onagenarian Sri B.V. Kakkilaya, well known as a leader of the Communist Party of India (CPI), a freedom fighter, a leader of the Karnataka unification movement, an award winning writer, a leader of the working class, a member of the Rajya Sabha and Karnataka State Assembly and as an orator was felicitated in a simple function at Bangalore on March 22, 2009. It was organised by the M.S. Krishnan Memorial Trust, Bangalore at the Senate Hall, Central College, Bangalore. A felicitation volume, titled Nirantara, comprising of articles about his life and work written by his close associates, lectures delivered at the ‘Kakkilaya 90: Dialogue with the new generation’ held in May last, lectures and articles written by Sri Kakkilaya etc., was presented to him on the occasion by veteran leader Sri M.C. Narasimhan. Sri BA Moidin, Subbayya Shetty and Dr. G. Ramakrishna spoke about the life and work of Sri Kakkilaya, Dr. Siddanagowda Patil, Secretary of Karnataka State CPI, was present. The programme was presided by Sri Ko. Chennabasappa.
ಹಿರಿಯ ಕಮ್ಯೂನಿಸ್ಟ್ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾಗಿ, ಪ್ರಶಸ್ತಿ ವಿಜೇತ ಚಿಂತನಶೀಲ ಬರಹಗಾರರಾಗಿ, ರೈತ-ಕಾರ್ಮಿಕರ ನಾಯಕರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಹಾಗೂ ಅತ್ಯುತ್ತಮ ಭಾಷಣಕಾರರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯವನ್ನು ದಾಟಿದ ಸಂದರ್ಭದಲ್ಲಿ ಈ ಜ್ಞಾನವೃದ್ಧರಿಗೆ ಒಂದು ಸರಳವಾದ ಅಭಿನಂದನಾ ಸಮಾರಂಭವನ್ನು ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆಯ ಆಶ್ರಯದಲ್ಲಿ ಮಾರ್ಚ್ 22, ರವಿವಾರದಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಕ್ಕಿಲ್ಲಾಯರ ಜೀವನ ಮತ್ತು ಹೋರಾಟಗಳ ಬಗ್ಗೆ ಅವರ ಆಪ್ತರು ಬರೆದಿರುವ ಲೇಖನಗಳು, ಕಳೆದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ‘ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು, ಕಕ್ಕಿಲ್ಲಾಯರ ಕೆಲವು ಭಾಷಣಗಳು ಮತ್ತು ಪ್ರಮುಖ ಲೇಖನಗಳನ್ನೊಳಗೊಂಡ ‘ನಿರಂತರ’ ಎಂಬ ಅಭಿನಂದನಾ ಗ್ರಂಥವನ್ನು ಅವರ ಸಂಗಾತಿ, ಹಿರಿಯ ಕಾರ್ಮಿಕ ನಾಯಕರಾದ ಎಂ.ಸಿ. ನರಸಿಂಹನ್ ಅವರು ಕಕ್ಕಿಲ್ಲಾಯರಿಗೆ ನೀಡಿ ಗೌರವಿಸಿದರು. ಶ್ರೀಯುತರಾದ ಬಿ.ಎ. ಮೊಹಿದೀನ್, ಬಿ. ಸುಬ್ಬಯ್ಯ ಶೆಟ್ಟಿ ಹಾಗೂ ಡಾ| ಜಿ. ರಾಮಕೃಷ್ಣ ಅವರು ಕಕ್ಕಿಲ್ಲಾಯರ ಜೀವನ-ಸಾಧನೆಗಳ ಬಗ್ಗೆ ಮಾತಾಡಿದರು. ಡಾ| ಸಿದ್ಧನಗೌಡ ಪಾಟೀಲ್ ಮತ್ತಿತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೋ. ಚೆನ್ನಬಸಪ್ಪನವರು ವಹಿಸಿದ್ದರು. ಶ್ರೀ ಕಕ್ಕಿಲ್ಲಾಯರ ಸಂಗಾತಿಗಳು, ಬಂಧುಗಳು, ಮಿತ್ರರು ಹಾಗೂ ಅಭಿಮಾನಿಗಳಿಂದ ತುಂಬಿದ್ದ ಸಭಾಂಗಣದಲ್ಲಿ ಹಳೆಯ ದಿನಗಳ ಹೋರಾಟಗಳ ನೆನಪುಗಳು ಬಿಚ್ಚುತ್ತಿದ್ದಂತೆ ಇಂದಿನ ಸಮಸ್ಯೆಗಳನ್ನು ಎದುರಿಸಲು ಮತ್ತೊಮ್ಮೆ ಸಮರಶೀಲರಾಗಿ ದುಡಿಯಬೇಕಾದ ಅಗತ್ಯವು ನೆರೆದಿದ್ದವರಿಗೆಲ್ಲಾ ಮನಗಂಡಿರಬೇಕು.

A book on Bhagath Singh, translated by Haleemath Sadiah (left), released by B.V. Kakkilaya on the occasion. ಹಲೀಮತ್ ಸ ಅದಿಯ (ಎಡಗಡೆ) ಅನುವಾದಿಸಿದ ಭಗತ್ ಸಿಂಗ್ ಬಗೆಗಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವ ಬಿ ವಿ ಕಕ್ಕಿಲ್ಲಾಯ

‘Nirantara’ presented to B.V. Kakkilaya by Sri MC Narasimhan (L to R: Sri K.S. Parthasarathy, B.A. Mohidin, Ko. Chennabasappa, BV Kakkilaya, Subbayya Shetty, MC Narasimhan. ‘ನಿರಂತರ’ ಸಂಭಾವನಾ ಗ್ರಂಥವನ್ನು ಬಿ ವಿ ಕಕ್ಕಿಲ್ಲಾಯರಿಗೆ ಅರ್ಪಿಸುತ್ತಿರುವ ಶ್ರೀಗಳಾದ (ಎಡದಿಂದ) ಕೆ ಎಸ್ ಪಾರ್ಥಸಾರಥಿ, ಬಿ ಎ ಮೊಹಿದಿನ್, ಕೋ ಚೆನ್ನಬಸಪ್ಪ, ಸುಬ್ಬಯ್ಯ ಶೆಟ್ಟಿ ಹಾಗೂ ಎಂಸಿ ನರಸಿಂಹನ್
ವರದಿಗಳು :: Reports