47ರ ಸ್ವಾತಂತ್ರ್ಯ

63ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬರೆದ ಲೇಖನ (ದಿನಾಂಕ ಆಗಸ್ಟ್ 13, 2010)

[dropcap]ನ[/dropcap]ಮ್ಮ 63ನೆಯ ಸ್ವಾತಂತ್ರ್ಯ ದಿನಾಚರಣೆ ಇದೇ ಆಗಸ್ಟ್ 15ನೇ ತಾರೀಕಿಗೆ ಜರಗುತ್ತದೆ. ‘ಎಲ್ಲಿಗೆ ಬಂತು ಯಾರಿಗೆ ಬಂತು 47ರ ಸ್ವಾತಂತ್ರ್ಯ’  ಎಂದು ದಲಿತ ಕವಿ ಸಿದ್ದಲಿಂಗಯ್ಯನವರು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳನ್ನು ಕಂಡು ರೋಸಿ ಹೋಗಿ ಕೇಳಿದ್ದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೀಗ ಎಲ್ಲಿಯೇ ಇರಲಿ ಯಾರ ಕೊಡೆಯೊಳಗೇ ಸೇರಿಕೊಳ್ಳಲಿ ನಮ್ಮನ್ನು ಆಳುವವರು ಆ ಪ್ರಶ್ನೆಗೆ ವಕ್ರ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್, ಭಾಜಪ, ಮತ್ತು ಸಂಘಪರಿವಾರಗಳ ಸಂದರ್ಭ ಸಾಧಕ ಎಡ ಬಿಡಂಗಿಗಳು, ವಿವಿಧ ಕೋಮುವಾದಿಗಳು ಎಲ್ಲರೂ 1947 ಆ 15 ರಂದು ದೊರಕಿದ ಸ್ವಾತಂತ್ರ್ಯವನ್ನು ವಿಕೃತಗೊಳಿಸಿದ್ದಾರೆ.   ಭವಿತವ್ಯದೊಂದಿಗೆ ಮುಖಾಮುಖಿ ಎಂಬ ಇತಿಹಾಸ ಪ್ರಸಿದ್ಧ ಭಾಷಣದೊಂದಿಗೆ ಜವಾಹರಲಾಲ್ ನೆಹರೂ ರವರು ಆರಂಭಿಸಿದ ಎಲ್ಲ ಪ್ರಗತಿಪರ ಭವಿಷತ್ತನ್ನು ನಿಜಗೊಳಿಸುವತ್ತಣ ಮೊದಲ ಹೆಜ್ಜೆಗಳನ್ನು ತ್ಯಜಿಸಿ ನಮ್ಮನ್ನು ಆಳುವವರು ನಮ್ಮ ದೇಶವನ್ನು  ಪರಾಧೀನಕ್ಕೆ, ದಾರಿದ್ರ್ಯಕ್ಕೆ ಮತ್ತು ಸರ್ವಾಧಿಕಾರಕ್ಕೆ ಗುರಿಪಡಿಸುವ ದಾರಿಯಲ್ಲಿ ಮುನ್ನುಗ್ಗುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನಬದ್ಧವಾದ ಪ್ರಜಾಪ್ರಭುತ್ವದ ಹಾದಿಯಲ್ಲಿ ಗುರಿಯನ್ನು ಸಾಧಿಸುವತ್ತ ಹೇಗೆ ಸಫಲವಾದ  ಹೆಜ್ಜೆಗಳನ್ನು ಮುಂದಿಡಬಹುದು ಎನ್ನುವುದನ್ನು ಕಮ್ಯುನಿಸ್ಟ್ ಮತ್ತು ಅವರ ಜೊತೆಗಾರರಾದ ಎಡ ಶಕ್ತಿಗಳು ಕಾರ್ಯಥಾ ತೋರಿಸಿಕೊಟ್ಟಿದ್ದಾರೆ. ಈ ಎರಡರ ನಡುವಿನ ಆಯ್ಕೆ ಇಂದು ನಮ್ಮ ಅನುಭವಸ್ಥ ಮತ್ತು ಪ್ರಭುದ್ದ ಜನತೆಯ ಕೈಯಲ್ಲಿದೆ.

ದೇಶಾದ್ಯಂತ ಲಕ್ಷಾಂತರ ರೈತರ ಆತ್ಮಹತ್ಯೆ ಎಂದು ಕರೆಯಲಾಗುವುದರಲ್ಲಿ ನಿಜಾರ್ಥದಲ್ಲಿ ಆಡಳಿತಗಾರರು ನಡೆಸುವ ಮಾನವ ಸಂಪತ್ತಿನ ಕೊಲೆಯ ಮತ್ತು ಪೀಡನೆಯ ಚಿತ್ರಣ ಕಂಡುಬರುತ್ತಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ, ಸಾಮ್ರಾಜ್ಯವಾದಿಗಳ ಆರ್ಥಿಕ ಶಕ್ತಿಯ ವರ್ಧನೆಗೆ ಕಾರಣವಾಗಿರುವ ಉದಾರೀಕರಣ, ಜಾಗತೀಕರಣ, ಖಾಸಗೀಕರಣಗಳನ್ನು ನಮ್ಮ ದೇಶವನ್ನು ಆಳುವ ನಮ್ಮ ಈಗಿನ ಪ್ರಭುತ್ವವಾದಿಗಳು ತೀವ್ರಗಳಿಸುತ್ತಿದ್ದಾರೆ. ಇದನ್ನು ಕೊನೆಗೊಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಈ ಸಮಸ್ಯೆಗಳಿಗೆ ಉತ್ತರ ಒಂದೇ: ಸಾಮ್ರಾಜ್ಯವಾದಿಗಳ, ಬಹು ರಾಷ್ಟ್ರೀಯ ಸಂಸ್ಥೆಗಳ ಪರವಾಗಿರುವವರನ್ನು ಅಧಿಕಾರದಿಂದ ತೊಲಗಿಸುವ ‘2ನೆಯ ಕ್ವಿಟ್ ಇಂಡಿಯಾ’ – ಅಧಿಕಾರ ಬಿಟ್ಟು ತೊಲಗಿ – ಎಂಬ ಹೊಸ ಚಳುವಳಿಗೆ ಎಲ್ಲ ದೇಶ ಪ್ರೇಮಿಗಳು,  ಜನಪರ ಶಕ್ತಿಗಳು, ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು ಒಟ್ಟಿನಲ್ಲಿ ಸಮಸ್ತ ಜನರು ಒಂದಾಗಿ ಹೋರಾಟ ರೂಪಿಸಬೇಕಾಗಿದೆ. ಈ ಹೋರಾಟದ ಆರಂಭಕ್ಕೆ ಇಂದು ದೇಶದ ಸಂಸತ್ತಿನಲ್ಲಿ ಮತ್ತು ಗುಜರಾತ್, ಕರ್ನಾಟಕ, ಪ.ಬಂಗಾಲ, ಮೊದಲಾದ ಪ್ರಜಾಪ್ರಭುತ್ವದ ದೇಗುಲಗಳಲ್ಲಿ ನಡೆಯುತ್ತಿರುವ ಗೊಂದಲಗಳನ್ನು ಉದಾಹರಣೆಗಳಾಗಿ ನಾವು ಕಂಡು ತಿಳಿಯಬೇಕಾಗಿದೆ.

ಬೆಲೆ ಏರಿಕೆಯ ಪ್ರಶ್ನೆ ಸಮಸ್ತ ಜನತೆಯನ್ನು ಕಾಡುತ್ತಿರುವಾಗ ವಿವಿಧ ಪಕ್ಷಗಳು ಬೆಲೆ ಏರಿಕೆಯ ಮುಂದುವರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಹತ್ತು ಹಲವು ಸೂಚನೆಗಳನ್ನು ಸರಕಾರದ ಮುಂದಿಟ್ಟು ಸಂಸತ್ತಿನಲ್ಲಿ ಧ್ವನಿ ಎತ್ತಿದಾಗ ಮನಮೋಹನ್ ಸಿಂಗ್ ಹಾಗೂ ಅವರನ್ನು ಬೆಂಬಲಿಸುವ ಆಳುವ ಒಕ್ಕೂಟವು ಪ್ರತಿಪಕ್ಷಗಳೊಳಗಿನ ಭಿನ್ನಾಭಿಪ್ರಾಯವನ್ನು ಲೇವಡಿ ಮಾಡಿ ತಲೆ ತಪ್ಪಿಸಿಕೊಳ್ಳುವ ಮಾರ್ಗ ಹಿಡಿದಿರುವುದು ಪ್ರಜಾತಂತ್ರದ ಲೇವಡಿಯಲ್ಲದೆ ಮತ್ತೇನಲ್ಲ. ಸಂಸತ್ತಿನಲ್ಲಿ ಚರ್ಚೆ ಮಾಡಿ ಪರಿಹಾರವನ್ನು ಕಂಡುಕೊಳ್ಳುವುದರ ಬದಲು ಸಂಸತ್ತನ್ನೇ ಕಡೆಗಾಣಿಸಿ ತೈಲೋತ್ಪನ್ನಗಳ ಬೆಲೆಯನ್ನು ಮತ್ತೆ ಏರಿಸಿರುವುದು ಅಕ್ಷಮ್ಯವಾಗಿದೆ.

ನಮ್ಮ ರಾಜ್ಯದಲ್ಲಿ ನೋಡಿದರೆ ವಿಧಾನ ಮಂಡಲದಲ್ಲಿ ಗಣಿಗಾರಿಕೆ ಮತ್ತಿತರ ಬಹಿರಂಗಗೊಂಡಿರುವ ಭ್ರಷ್ಟಾಚಾರಗಳ ಬಗ್ಗೆ ಮತ್ತು ಲೋಕಾಯುಕ್ತರ ದಿಟ್ಟ ಕ್ರಮಗಳ ಬಗ್ಗೆ  ಚರ್ಚಿಸಿ ಭ್ರಷ್ಟ ಮಂತ್ರಿವರ್ಯರೊಳಗೊಂಡ ಅಧಿಕಾರಿಗಳನ್ನು ಶಿಕ್ಷಿಸುವುದರ ಬದಲು ಆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಕ್ರಮಗಳು ನಡೆದುವು. ಹಿಂದೆ ಆಳುತ್ತಿದ್ದವರು, ಈಗ ಆಳುತ್ತಿರುವವರು ಕೊಳ್ಳೆ ಹೊಡೆಯುವ ಭ್ರಷ್ಟಾಚಾರಕ್ಕೆ ವಿರುದ್ದವಾಗಿ ಯಾವ ಹೆಜ್ಜೆಯನ್ನೂ ಇರಿಸದೆ ಇದೀಗ ಪಾದ ಯಾತ್ರೆ, ಸಮಾವೇಶ, ಅತ್ತಿತ್ತ ಕೆಸರಾಟಗಳಲ್ಲಿ ಎರಡೂ ಕಡೆಯ ವರಿಷ್ಟರು ಭಾಗವಹಿಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಕೇಂದ್ರ ಸರಕಾರವು ಸಹಾ ಸಂಪತ್ತಿನ ಕೊಳ್ಳೆ ಹಾಗೂ ಭೂಮಿ, ಜನ ಅರಣ್ಯಗಳನ್ನೆಲ್ಲ ದೋಚಿ ತಮ್ಮದಾಗಿಸಿಕೊಳ್ಳುವವರ ವಿರುದ್ದ ಕ್ರಮವಹಿಸುವ ಬದಲಾಗಿ ತೋರಿಕೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಥಾ ಕಿರುಬೆರಳನ್ನೂ ಎತ್ತದಿರುವ ಸೋಗಲಾಡಿತನವನ್ನು ತೋರಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಲೋಕಾಯುಕ್ತರು, ರಾಜ್ಯಪಾಲರು, ಬುದ್ಧಿ ಜೀವಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಉಳ್ಳ ಪ್ರಮುಖರು ಎಲ್ಲರೂ ಈ ಹಗರಣದ ವಿರುದ್ದ ಧ್ವನಿ ಎತ್ತಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಆ 15, 2010 ರಂದು ಕೆಂಪು ಕೋಟೆಯ ಸ್ವಾತಂತ್ರ್ಯ ಸಮಾರಂಭದ ಕಟಕಟೆಯಲ್ಲಿ ಅಶೋಕ ಚಕ್ರ ಹೊತ್ತ ತ್ರಿವರ್ಣ ದ್ವಜ ಅರಳುತ್ತದೆ. ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   .. ಜನ ಗಣ ಮಂಗಳದಾಯಕ ಜಯ ಹೇ ಭಾರತ ಭಾಗ್ಯ ವಿದಾತ ..   ..’ ರಾಷ್ಟಗೀತೆ ಮೊಳಗುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಅಪ ಸಾಧನೆಗಳನ್ನು ಬಚ್ಚಿಟ್ಟು ಸಾಧನೆಗಳ ಕನಸುಗಳನ್ನು ಬಿತ್ತರಿಸುತ್ತಾರೆ. ಅದೇ ಸಮಯದಲ್ಲಿ ಕರ್ನಾಟಕ, ಗುಜರಾತ್ ಹಾಗೂ ಇನ್ನಿತರ ರಾಜ್ಯಗಳ ರಾಜಧಾನಿಗಳಲ್ಲಿ ಅದೇ ಬಾವುಟ, ಅದೇ ರಾಷ್ಟ್ರಗೀತೆ ಮೊಳಗಿದರೂ ಕೆಳಗೆ ನಿಂತು ಧ್ವಜ ವಂದನೆ ಸ್ವೀಕರಿಸುವವರು ಅವುಗಳನ್ನು ಕಾರ್ಯಥಾ ಗೌರವಿಸದೆ ಇರುವುದು ನಮ್ಮ ದುರಂತ. ಮೊದಲನೆಯ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ವಸಾಹತುಶಾಹಿ ಆಡಳಿತದ ವ್ಯವಸ್ಥೆಯ ಸಂಪೂರ್ಣ ನಿರ್ಮೂಲನೆ, ಸ್ವಾವಲಂಬನೆ, ಔಧ್ಯಮೀಕರಣ, ವೈಜ್ಞಾನಿಕ ಶಿಕ್ಷಣದ ವ್ಯವಸ್ಥೆ, ಭೂಸುಧಾರಣೆ, ರಾಜ ನವಾಬರುಗಳ ಆಡಳಿತ ಮತ್ತು ರಾಜಧನ ರದ್ದತಿ, ಜೀವ ವಿಮೆಗಳ ರಾಷ್ಟ್ರೀಕರಣ, ಉಳುವವನಿಗೆ ಕೃಷಿ ಭೂಮಿ ಮತ್ತು ಕೃಷಿಗೆ ಆಧ್ಯತೆಯ ನೆಲೆಯಲ್ಲಿ ಸಹಾಯ, ಕೃಷಿ ಉತ್ಪನ್ನಗಳಿಗೆ ಸುವ್ಯಸ್ಥಿತ ಮಾರುಕಟ್ಟೆ ಮತ್ತು ಲಾಭದಾಯಕ ಬೆಲೆ, ಉತ್ತಮ ಗೊಬ್ಬರಗಳ ಪೂರೈಕೆ, ವಿದ್ಯುತ್ ಶಕ್ತಿ ಮತ್ತು ನೀರಾವರಿ ಸೌಲಬ್ಯಗಳ ವಿಸ್ತರಣೆ, ದುಡಿವ ಜನರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೈಜ್ಞಾನಿಕ ಶಿಕ್ಷಣ, ವಿದ್ಯಾಸಂಸ್ಥೆಗಳನ್ನು ಧಾರ್ಮಿಕ ಹಾಗೂ ಲಾಭಬಡುಕ ಖಾಸಗಿಯವರ ಕಪಿ ಮುಷ್ಟಿಯಿಂದ ಬಿಡಿಸಿ ಅರ್ಹತೆಯ ಆಧಾರದಲ್ಲಿ ಶಿಕ್ಷಣದ ವ್ಯವಸ್ಥೆ, ಇತ್ಯಾದಿಗಳ ಗುರಿಯನ್ನು ಇಟ್ಟುಕೊಂಡು ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈಗ ಅವುಗಳನ್ನು ಸಂಪೂರ್ಣವಾಗಿ ತೊರೆದು ದುಡಿದು ತಿನ್ನುವ ಬಹು ಸಂಖ್ಯಾತ ಜನರ ದಾರಿದ್ರ್ಯಕ್ಕೆ ಗುರಿಪಡಿಸುವ ದಾರಿಯಲ್ಲಿ ಆಳುವವರು  ಸಾಗುತ್ತಿರುವುದನ್ನು ನಾವಿಂದು ಕಾಣುತ್ತೇವೆ.

ಪರಮಾಣು ಅಸ್ತ್ರದ ಕೊಡೆಹಿಡಿಯುವ ಟೊಳ್ಳು ಆಸ್ವಾಸನೆಗೆ ಮರುಳಾಗಿ ದೇಶದ ವಿದೇಶಾಂಗ ನೀತಿಯ ಅಪಾಯಕಾರಿ ಬದಲಾವಣೆಗಳನ್ನು ತರಲು ಪಡುವ ಪ್ರಯತ್ನವನ್ನಂತೂ ಕೊನೆಗಾಣಿಸಬೇಕೆಂದು ಭವಿಷತ್ತಿನ ಬಗ್ಗೆ ಕಾಳಜಿ ಇರುವವರೆಲ್ಲರೂ ಅಪೇಕ್ಷಿಸುತ್ತಾರೆ. ಇದಕ್ಕೆ ನಮ್ಮ ಸಂಸತ್ತು ಮತ್ತು ವಿಧಾನ ಸಭೆಗಳು ಬದಲಾಗಬೇಕು. ಕೋಟ್ಯಾಧಿಪತಿಗಳು, ಭೂಕಬಳಿಕೆದಾರರು, ಗಣಿಗಳ್ಳರು, ಅರಣ್ಯ ಲೂಟಿಗಾರರು ಮತ್ತು ಅವರ ಪ್ರತಿನಿಧಿಗಳು ಅವುಗಳಲ್ಲಿ ತುಂಬಿಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಬಹುಸಂಖ್ಯಾತ ದುಡಿದು ತಿನ್ನುವ ಜನರ ಬದುಕು ದುಸ್ತರವಾಗುತ್ತಿದೆ. ಈ ವೈಪರೀತ್ಯಗಳನ್ನು ಕೊನೆಗಾಣಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಒಂದುಗೂಡಿ ಸಮಾಲೋಚನೆ ಮಾಡಿ ಒಂದು ಹೊಸ ಅಭಿಯಾನ ಆರಂಭಿಸುವತ್ತ ಹೆಜ್ಜೆ ಇಡುವ ಪ್ರತಿಜ್ಞೆ ಮಾಡೋಣ ಮತ್ತು ಅದಕ್ಕೆ ಕಾರ್ಯ ಸಿದ್ದತೆ ನಡೆಸೋಣ.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಸಂವಿಧಾನಬಾಹಿರ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಿಬ್ಬರ ಆಣೆ ಪ್ರಮಾಣ ಪ್ರಹಸನದ ಬಗ್ಗೆ ಲೇಖನ (ದಿನಾಂಕ ಜೂನ್ 23, 2011)

ಇದೇ ಜೂನ್ 27ರಂದು ಧರ್ಮಸ್ಥಳದಲ್ಲಿ ನಮ್ಮ ಹಾಲೀ ಮತ್ತು ಮಾಜೀ ಮುಖ್ಯಮಂತ್ರಿಗಳಾಗಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರು ಹಿಂದೆ ಜೊತೆಗಿದ್ದುಕೊಂಡು ತಮ್ಮೊಳಗೆ ಮಾಡಿಕೊಂಡ್ಡಿದ್ದ ಮತ್ತು ಬಹುಷಃ ತಮ್ಮಿಬ್ಬರಿಗೆ ಮಾತ್ರ ತಿಳಿದಿರುವ ತಮ್ಮ ತಮ್ಮ ದುರ್ವ್ಯವಹಾರಗಳ ಕುರಿತು ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಲಿದೆ ಎಂಬ ಪ್ರಚಾರ ನಡೆದಿತ್ತು. ಈಗ ಅದರ ಬದಲು ಕೇವಲ ಮನಸ್ಸಾಕ್ಷಿಯಷ್ಟೇ ನಡೆಯುತ್ತದೆ ಎಂಬ ಹೇಳಿಕೆಗಳು ಬರತೊಡಗಿವೆ. ಅವರಿಬ್ಬರ ದುರ್ವ್ಯವಹಾರಗಳೆಲ್ಲವೂ ಬಯಲುಗೊಳ್ಳುವುದೆಂಬ ಭೀತಿಯಿಂದ ಅವರು ಈ ನೆವನವನ್ನು ಮುಂದೊಡ್ಡಿದ್ದಾರೆ ಎಂದು ತೋರುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಮಠಾಧೀಶರು ತಮ್ಮ ಸಲಹೆಗಳನ್ನು ಕೊಟ್ಟಿರುವುದೂ ಪೂರ್ವ ಯೋಜಿತವೆಂಬಂತೆಯೇ ಭಾಸವಾಗುತ್ತದೆ.

ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದರ ಬಗ್ಗೆ ರಾಷ್ಟ್ರಕವಿ ಕುವೆಂಪುರವರು ಒಂದು ಸುಂದರವಾದ ಮತ್ತು ಅರ್ಥ ಪೂರ್ಣವಾದ ಕವನವನ್ನೇ ಬರೆದಿರುವರು. ಅದು ಪ್ರಸ್ತುತ ಸಂದರ್ಭದಲ್ಲಿ ನೆನಪಿಸುವುದು ಸೂಕ್ತವೆನಿಸುತ್ತಿದೆ. ಕುವೆಂಪುರವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ವೀರೇಂದ್ರ ಹೆಗ್ಡೆಯವರ ಹಿರಿಯರಾದ  ಮಂಜಯ್ಯ ಹೆಗ್ಡೆಯವರು ಆಡಳಿತೆಯನ್ನು ನಡೆಸುತ್ತಿದ್ದರು. ಇಂದಿಗಿಂತಲೂ ಅಂದು ಧರ್ಮಸ್ಥಳದ ಮಹತ್ವದ ಬಗ್ಗೆ ಜನರ ಭೀತಿ ಅಧಿಕವಿತ್ತು. ಧರ್ಮಸ್ಥಳದಲ್ಲಿ ಸಾಮಾನ್ಯ ಜನರು ಆಚರಿಸುತ್ತಿದ್ದ ಹರಕೆ ಸಂದಾಯಗಳ ರೀತಿ ನೀತಿಗಳನ್ನು ಖುದ್ದಾಗಿ ಕಂಡು ಅದು ಅಮಾನವೀಯವೆಂದು ಮನನೊಂದು ಧರ್ಮಸ್ಥಳ ಎಂಬ ಒಂದು ಕವನವನ್ನು ಸ್ಥಳದಲ್ಲೇ ರಚಿಸಿ ಅದನ್ನು ಇಕ್ಷು ಗಂಗೋತ್ರಿ ಎಂಬ ತನ್ನ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:

ಹೃದಯ  ಧರ್ಮಸ್ಥಳದಿ ನಿನ್ನಂತರಾತ್ಮನಿರೆ, ಅಂಜುತಿಹೆ ಏಕೆ?  ..   ..

ಅಲ್ಲಿ ದರ್ಮಸ್ಥಳದಿ ಹೇಳಿಗೆಯ ಹಾವಿನೊಲು, ದೇಗುಲಕೆ ವಶನೆ ಹೇಳ್ ಮಂಜುನಾಥ?

[ನಿನ್ನ ಅಂತರಾತ್ಮದಲ್ಲಿ ನಿಜವಾಗಿಯೂ ಮಂಜುನಾಥನು ಇರುವುದಾದರೆ ಹಾವಾಡಿಗನ ಹೇಳಿಗೆಯಂತಿರುವ ಧರ್ಮಸ್ಥಳದ ದೇಗುಲದಲ್ಲಿ ಮಂಜುನಾಥ ಬಂಧಿಯಾಗಿರುವನೇನು?]

ನಿನ್ನ  ಭಯದ ಉರಿಗೊಳ್ಳಿ ನಿನಗೆ ಅದುವೇ ಪಂಜುರ್ಲಿ; ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತ!

[ನಿನ್ನ ಭಯವೆಂಬ ಉರಿಯುವ ಕೊಳ್ಳಿಯೇ ನಿನ್ನನ್ನು ಪಂಜುರ್ಲಿಯಂತೆ ಕಾಡುತ್ತದೆ, ನಿನ್ನ ಅಳುಕೇ ನಿನಗೆ ಅಣ್ಣಪ್ಪ ಭೂತದಂತೆ ಕಾಡುತ್ತದೆ.]

ಎಲ್ಲಿ ಮತ್ಸರವುಅಳಿದು ಮೈತ್ರಿ ಮೂಡುವಲ್ಲಿ ಮೂಡಿತೆಂದೇ ತಿಳಿಯೋ ಧರ್ಮಸ್ಠಳ.

ಸುಲಿಗೆ ವಂಚನೆ ಕಳೆದವನ ಮನವೇ ಮಂಜುನಾಥನ ಮಂಚ, ಹೃದಯಕಮಲ!

[ಎಲ್ಲಿ ಮತ್ಸರವು ಆಳಿದು ಗೆಳೆತನವು ಮೂಡುವುದೋ ಅಲ್ಲಿ ನಿಜವಾದ ಧರ್ಮಸ್ಥಳ ಮೂಡುತ್ತದೆ ಎಂದು ತಿಳಿ. ಸುಲಿಗೆ, ವಂಚನೆ, ಹಿಂಸೆಗಳನ್ನು ಕಳೆದವನ ಮನಸ್ಸೇ ಮಂಜುನಾಥನ ಪೀಠ!]

ಮೂಢ ಹೃದಯದ ಗೂಢ ಗಾಢಾಂಧಕಾರವನು ಹೊರ ದೂಡದೆಯೆ ರೂಢಿ ಎಂಬ ನೆವನದಿ ಕಾಣಿಕೆಯ ಹೆಸರಿಟ್ಟು ಕಾಂಚನವನೆಳೆದುಕೊಳೆ ಜ್ಯೋತಿ ಮೂಡುವುದೆಂದೋ ಜಡದ ಜಗದಿ?

[ಮೂಢರ ಹೃದಯಗಳ ನಿಗೂಢ ಗಾಢಾಂಧಕಾರವನ್ನು ಕಾಣಿಕೆ ಎಂಬ ಹೆಸರಲ್ಲಿ ಕಾಂಚನವನ್ನು ಸೆಳೆಯುವ ತಂತ್ರಕ್ಕೆ ಪ್ರೋತ್ಸಾಹ ಕೊಟ್ಟರೆ ಜಗತ್ತಿನಲ್ಲಿ ಜ್ಞಾನ ಜ್ಯೊತಿ ಮೂಡುವುದು ಎಂದು?]

ಹೆಮ್ಮೆಯನು ಬಿಡು, ಹಿರಿಯ! ದಮ್ಮಯ್ಯನಿಡು ಜಿನಗೆ! ನಿನ್ನಂತೆ ಸಂಸ್ಥೆಯೂ ನಶ್ವರವದು!

[ಧರ್ಮಸ್ಥಳದ ಹಿರಿಯನೇ,  ಅಹಂಭಾವವನ್ನು ತೊರೆದು ಜಿನನಿಗೆ ಶರಣಾಗು, ನೀನಾಗಲಿ ನಿನ್ನ ಸಂಸ್ಥೆಯಾಗಲಿ ಶಾಶ್ವತವೇನಲ್ಲ!]

ಧರ್ಮಕ್ಕೆ ಧರ್ಮಸಂಸ್ಥೆಗೆ ನಿಂದೆ ನನದಲ್ಲ; ಧರ್ಮವೇಷದ ಅಧರ್ಮಕ್ಕೆ ಮುನಿದೆ, ನಿಜದ ಧರ್ಮಸ್ಥಳಕೆ ನಿಜದ ಧರ್ಮಕೆ ಇದೆಕೋ ಕೈ ಮುಗಿದೆ, ಮಣಿದೆ, ಹಿರಿದು ಕಿರಿದೆನ್ನದೆ!

[ಧರ್ಮ ಮತ್ತು ಧರ್ಮ ಸಂಸ್ಥೆಗಳಿಗೆ ನಾನು ನಿಂದಿಸುವುದಿಲ್ಲ, ಧರ್ಮದ ಹೆಸರಲ್ಲಿ ನಡೆಯುವ ಅಧರ್ಮಕ್ಕೆ ನನ್ನ ಮುನಿಸು, ನಿಜವಾದ ಧರ್ಮಕ್ಕೆ ನಾನು ತಲೆ ಬಾಗುತ್ತೇನೆ ಮತ್ತು ಕೈ ಮುಗಿಯುತ್ತೇನೆ]

ಇದು ಕುವೆಂಪುರವರ ಶ್ರೇಷ್ಠ ಕವನಗಳಲ್ಲೊಂದು ಎಂದೆನಿಸಿದೆ. ಧರ್ಮಸ್ಥಳದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು, ಆಣೆ ಇಡುವುದು  ಧರ್ಮದ ಹೆಸರಲ್ಲಿ ನಡೆಯುವ ಅಧರ್ಮವೆಂದೂ, ಜನರನ್ನು ಮೌಡ್ಯಕ್ಕೆ ತಳ್ಳುವ ಕ್ರಿಯೆಯೆಂದೂ ಅರ್ಧ ಶತಮಾನಗಳ ಹಿಂದೆಯೇ ಕುವೆಂಪುರವರು ಸಾರಿದ್ದರು. ಹಾಗಿರುವಾಗ ಜನ ನಾಯಕರೆಂದೆನಿಸಿಕೊಂಡಿರುವ ಯೆಡ್ಯೂರಪ್ಪ ಮತ್ತು ಕುಮಾರಸ್ವಾಮಿಯವರ ಕುಕೃತ್ಯಕ್ಕೆ ಅಸಹ್ಯ ಪಡುತ್ತೇವೆ ಮತ್ತು ಅದನ್ನು ಖಂಡಿಸುತ್ತೇವೆ. ಏನಿದ್ದರೂ ಎಲ್ಲ ಅವ್ಯವಹಾರಗಳನ್ನು ಬಯಲು ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಅವುಗಳನ್ನು ನಮ್ಮ ಸಂವಿಧಾನಕ್ಕನುಗುಣವಾಗಿ ಶಾಸನ ಸಭೆಗಳಲ್ಲಿಯೋ, ನ್ಯಾಯಲಯಗಳಲ್ಲಿಯೋ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಅವರದ್ದಾಗಿರುತ್ತದೆ. ಮತ್ತು ಇವುಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗಿದೆ. ಇದಕ್ಕೆ ಅವರು ಬದ್ಧರಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ಪಾಲಿಸುತ್ತಾರೆ ಎಂದು ಹಾರೈಸುತ್ತೇವೆ.

ಲೋಕಾಯುಕ್ತವನ್ನು ಬಲಪಡಿಸಲು ಸರಕಾರಕ್ಕೆ ಒತ್ತಾಯ

ಕರ್ನಾಟಕ ಲೋಕಾಯುಕ್ತರ ಬಗ್ಗೆ ಜೂನ್ 15, 2010 ರಂದು ಬರೆದ ಲೇಖನ

[dropcap]ನ[/dropcap]ಮ್ಮ ಪ್ರಸ್ತುತ ಸಂವಿಧಾನಬದ್ದವಾದ ಪ್ರಜಾಪ್ರಭುತ್ವದಲ್ಲಿ ಲೋಕಪಾಲ ಮತ್ತು ಲೋಕಾಯುಕ್ತಗಳು ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುವಂತೆ ನಿಯೋಜಿಸಲಾಗಿದೆ. ಆದರೆ ಕೇಂದ್ರಕ್ಕೆ ಸಂಭಂದಿಸಿದ ಲೋಕಪಾಲವು ನಿಜವಾಗಿ 63 ವರ್ಷಗಳಲ್ಲಿಯೂ ಅಸ್ತಿತ್ವಕ್ಕೆ ಬಂದಿಲ್ಲ. ಅದಕ್ಕೆ ಒಂದೇ ಒಂದು ಕಾರಣ ಲೋಕಪಾಲದ ವ್ಯಾಪ್ತಿಯಿಂದ ಪ್ರಧಾನ ಮಂತ್ರಿಯವರನ್ನು ಹೊರಗೆ ಇರಿಸಬೇಕೆಂಬ ಕೇಂದ್ರ ಸರಕಾರದ ನಿಲುವು. ಕೆಲವು ರಾಜ್ಯಗಳಲ್ಲಿ ಲೋಕಾಯುಕ್ತಗಳು ಇವೆ. ಆದರೆ ಅವುಗಳ ವ್ಯಾಪ್ತಿಯಿಂದ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ಹೊರಗೆ ಇಡಲಾಗಿದೆ. ಎಂದರೆ ಕೇಂದ್ರ ಸರಕಾರವು ನಿಜವಾದ ಅರ್ಥದಲ್ಲಿ ಲೋಕಪಾಲ ಎಂಬ ಸಂಸ್ಥೆಯ ವ್ಯಾಪ್ತಿಯಿಂದ ಸಂಪೂರ್ಣ ಅಬಾಧಿತವಾಗಿದೆ ಹಾಗೂ ರಾಜ್ಯ ಸರಕಾರಗಳೂ ಆಯಾ ರಾಜ್ಯಗಳ ಲೋಕಾಯುಕ್ತರಿಂದ ಅಬಾಧಿತವಾಗಿವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಒಳ ನುಸುಳಿ ಕೆಲಸ ಮಾಡಲು ಸಾಕಷ್ಟು ಅವಕಾಶವನ್ನು ನಮ್ಮ ದೇಶವನ್ನು ಆಳಿರುವ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡಿವೆ. ಈ ಕೊರತೆಯು ಕಳೆದ 63 ವರ್ಷಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಮ್ಮನ್ನು ಆಳಿರುವ ಎಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಣ್ಣು ಮುಚ್ಚಾಲೆಯಿಂದ ನಡೆದಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸರಕಾರದ ಉನ್ನತ ಅಧಿಕಾರಿಗಳು ಅವರ ಬಲೆಗೆ ಬಿದ್ದು ಪ್ರಾಥಮಿಕ ತನಿಖೆಯಿಂದ  ಪೂರ್ಣ ನ್ಯಾಯಾಂಗ ವಿಚಾರಣೆಗೆ ಗುರಿಪಡಿಸಲು ಸಾಕಷ್ಟು ಪುರಾವೆಗಳು ದೊರೆತ ಸಂಧರ್ಭಗಳಲ್ಲಿ ಸಹಾ ಸರಕಾರದ ಕೃಪಾಕಟಾಕ್ಷದಿಂದ ಭೃಷ್ಟ ಅಧಿಕಾರಿಗಳು ತಪ್ಪಿಸಿಕೊಂಡಿರುವಂಥಾ ಉದಾಹರಣೆಗಳು ಸಾಕಷ್ಟಿವೆ.  ಈ ಮುಖ್ಯ ಪ್ರಶ್ನೆಯನ್ನು ಒಂದು ವೇಳೆ ಬದಿಗಿರಿಸಿದರೂ ಸಹಾ ಇದ್ದ ವ್ಯವಸ್ಥೆಯಲ್ಲಿಯೇ ರಾಜ್ಯಗಳ ಲೋಕಾಯುಕ್ತಗಳು ಉತ್ತಮ ಕಾರ್ಯ ನಿರ್ವಹಿಸಿವೆ ಎನ್ನುವುದು ಗಮನಾರ್ಹವಾಗಿದೆ.

ನನ್ನ ಸ್ವ ಅನುಭವದಿಂದ ಹೇಳಬಹುದಾದ ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಸರಕಾರಿ ರಸ್ತೆ ಸಾರಿಗೆ ಸಂಸ್ಥೆಗೆ  ನಷ್ಟ ಉಂಟಾಗುವಂತೆ ಹಾಗೂ ಅದರ ಕಾರ್ಯವ್ಯಾಪ್ತಿಯ ಮೇಲೆ ಅಕ್ರಮವಾಗಿ ಒಳ ನುಸುಳಿ ಆತಂಕ ಉಂಟು ಮಾಡುವಂತೆ ವರ್ತಿಸುತ್ತಿದ್ದ ಖಾಸಗಿ ರಸ್ತೆ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕಾನೂನನ್ನು ದುರ್ಬಳಕೆ ಮಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪರವಾನಿಗೆ ನೀಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಕಾರ್ಮಿಕ ಮತ್ತು ನೌಕರರ AITUC ಸಂಘಟಣೆಯ ಆಧ್ಯಕ್ಷ ಎಂಬ ನೆಲೆಯಲ್ಲಿ ಪ್ರಶ್ನಾತೀತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ನಾನೊಮ್ಮೆ ಮನವಿ ಸಲ್ಲಿಸಿದ್ದೆ. ಆ ಮನವಿಯನ್ನು ಸ್ವೀಕರಿಸಿ ಖಾಸಗಿಯವರಿಗೆ ಈ ರೀತಿ ಅವಕಾಶ ನೀಡುವುದನ್ನು 15 ದಿನಗಳೊಳಗೆ ತಡೆಗಟ್ಟದಿದ್ದರೆ ಅದಕ್ಕೆ ಕಾರಣರಾದ ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಕೋರ್ಟು ನಿಂದನೆ ಕ್ರಮವನ್ನು ಜರುಗಿಸಬೇಕೆಂಬ ಆದೇಶವನ್ನು ಲೋಕಾಯುಕ್ತರು ನೀಡಿದ್ದು ಒಂದು ಶ್ಲಾಘನೀಯ ಉದಾಹರಣೆ.

ಅಲ್ಲದೆ ಲೋಕಾಯುಕ್ತರ ಇತ್ತೀಚಿಗಿನ ಕಾರ್ಯವಿಧಾನಗಳು ಅತ್ಯಂತ ಪ್ರಸಂಶನೀಯವಾಗಿವೆ. ನ್ಯಾಯಮೂರ್ತಿ.UL ಭಟ್ ಅವರಿಗೆ ಗಣಿಗಾರಿಕೆಗೆ ಸಂಭಂಧಿಸಿದ ಅಕ್ರಮಗಳ ತನಿಖೆಯನ್ನು ರಾಜ್ಯಸರಕಾರ ಒಪ್ಪಿಸಿತ್ತು. ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದ ಆರೋಪಗಳ ತನಿಖೆಯನ್ನು CBI ಗೆ ಒಪ್ಪಿಸಬೇಕೆಂಬ ನ್ಯಾ.ಮೂ.ಗಳ ಆದೇಶವನ್ನು ಕೇಂದ್ರ ಸರಕಾರ ಜಾರಿಗೆ ತರುವುದರ ಬದಲು ನ್ಯಾ.ಮೂ.ಗಳೇ ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆ ವಿಷಯವೀಗ  ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಲೋಕಾಯುಕ್ತದ ಮುಂದಿದ್ದು  ಅವರು ಗಣಿಗಾರಿಕೆಯ ಬಗ್ಗೆ ತನಿಖೆ ಮುಂದುವರಿಸಿ ವರದಿಯನ್ನು ಪೂರ್ಣಗೊಳಿಸಿ ಸರಕಾರಕ್ಕೆ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಣಿ ದೊರೆಗಳ ಪ್ರಭಾವದಿಂದಲೋ ಮಾಜೀ ಅಥವಾ ಹಾಲೀ ಮು.ಮಂತ್ರಿಗಳ ಕೈವಾಡದಿಂದಲೋ ಗಣಿ ಹಗರಣದ ವರದಿಯನ್ನು ಸರಕಾರವು ಇನ್ನೂ ವಿಚಾರಣೆಗೆ ಒಪ್ಪಿಸಲಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಹಾಗೆಯೇ ಅರಣ್ಯ ನಾಶದ ಬಗ್ಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದಿರುವಂಥಾ ಭೂಹಗರಣಗಳ ಬಗ್ಗೆ ನಡೆಸಿರುವ ತನಿಖೆಗಳು ಎಲ್ಲಿಗೆ ತಲುಪಿವೆ ಮತ್ತು ಅವುಗಳ ಫಲಿತಾಂಶವೇನು ಎಂಬ ಸುದ್ದಿ ಕೂಡಾ ಹೊರಗೆ ಬಾರದಂತೆ ತಡೆ ಹಿಡಿಯಲಾಗಿದೆ ಎಂಬುದು ಸಂಶಯಕ್ಕೆ ಎಡೆಯಾಗಿದೆ.

ಇಂತಹ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಚುರುಕಾಗಿದೆ ಹಾಗೂ ಜನರ ಸೊತ್ತುಗಳ ಅಪಹರಣಗಳ ವಿರುದ್ದ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು  ಅಯೋಗಗಳು ತಯಾರಾಗಿವೆ ಎಂಬ ಭರವಸೆ ಜನರಿಗೆ ಬೇಕಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿರುವ ನ್ಯಾ.ಮೂರ್ತಿ.ಸಂತೋಷ್ ಹೆಗ್ಡೆಯವರ ಮುಂದಾಳುತನದಲ್ಲಿರುವ ಲೋಕಾಯುಕ್ತವು ಸಲ್ಲಿಸಿರುವ ವರದಿಗಳೆಲ್ಲವೂ ಬಹಿರಂಗಗೊಳ್ಳಬೇಕು ಮತ್ತು ಅಂಗೀಕೃತವಾಗಬೇಕು ಹಾಗೂ ಮುಂದಿನ ಕ್ರಮ ಜರುಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಲೋಕಾಯುಕ್ತವು ಇನ್ನಷ್ಟು ಹೆಚ್ಹು ಕಾಲ ಅಧಿಕಾರದಲ್ಲಿ ಮುಂದುವರಿದು ಭ್ರಷ್ಟಾಚಾರದ ನಿರ್ಮೂಲನೆಗೆ ಭದ್ರವಾದ ಬುನಾದಿಯನ್ನು ನಿರ್ಮಿಸಬೇಕೆಂಬ ಸಾರ್ವಾಜನಿಕರ ಅಪೇಕ್ಷೆಯನ್ನು ಅವರ ಚಟುವಟಿಕೆಗಳನ್ನು ಕಂಡು ತಿಳಿದಿರುವ ನಾನು ಹಾರೈಸುತ್ತೇನೆ.

ಲೋಕಾಯುಕ್ತರನ್ನು ಬಲಪಡಿಸುವ ದೃಷ್ಟಿಯಿಂದ ಅವರ ವರದಿಗಳಲ್ಲಿ ತಪ್ಪಿತಸ್ಥರೆಂದು ಉಲ್ಲೇಖಿಸಲಾಗಿರುವ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಅಪಾದಿತರನ್ನಾಗಿ ವಿಚಾರಣೆಗೆ ಒಳಪಡಿಸುವ ಕ್ರಮವನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಸರಕಾರ ಜಾರಿಗೆ ತರಬೇಕು ಅಲ್ಲದೆ ಆಪಾದಿತರನ್ನು ಲೋಕಾಯುಕ್ತದ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಿ ಪ್ರಾಥಮಿಕ ತೀರ್ಪು ನೀಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಬೇಕು. ಈ ಕ್ರಮಗಳನ್ನು ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿಯೇ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.