ಉರುಳು ಸೇವೆಯ ಬದಲಿಗೆ ಜನಸೇವೆ ಮಾಡಿ

[dropcap]ಕಾಂ[/dropcap]ಗ್ರೆಸ್ ಅಧ್ಯಕ್ಷೆ  ಶ್ರೀಮತಿ ಸೋನಿಯಾ ಗಾಂಧಿ, ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಪರಿಣತ ತಜ್ಞರ ಚಿಕಿತ್ಸೆಯನ್ನು ಪಡೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರಲ್ಲಿ ಸದ್ಭಾವನೆಯುಳ್ಳವರೆಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂಬ ಕಳಕಳಿಯನ್ನು ಹೊಂದಿರುವುದೂ ಪ್ರಕಟವಾಗಿದೆ. ಅದು ಸಹಜವೂ ಹೌದು. ಅಮೆರಿಕಾದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ಸೋನಿಯಾ ಗಾಂಧಿಯವರಾಗಲಿ, ಚಿಕಿತ್ಸೆಯನ್ನು ನೀಡುವ ವೈದ್ಯರಾಗಲಿ ಯಾವುದೇ ದೇವಾಲಯಗಳಲ್ಲಿ, ಇಗರ್ಜಿ, ಮಸೀದಿಗಳಲ್ಲಿ ಯಾವುದೇ ತರದ ಹರಕೆಯನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡಿಕೊಂಡ ವರದಿ ಪ್ರಕಟವಾಗಲಿಲ್ಲ. ವೈದ್ಯರು ವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಮಾತ್ರ ಅನುಸರಿಸಿ ಸೋನಿಯಾ ಗಾಂಧಿಯವರನ್ನು ಗುಣಪಡಿಸಲು ತಮ್ಮ ಶಕ್ತಿ ಮೀರಿ ವೈಜ್ಞಾನಿಕ ಕ್ರಿಯೆಗಳಲ್ಲಿ ಮಗ್ನರಾಗಿದ್ದಾರೆ.

ಆದರೆ ಸೋನಿಯಾ ಗಾಂಧಿಯವರು ಗುಣಮುಖರಾಗುವಂತೆ ನಮ್ಮಲ್ಲಿಯ ಕೆಲವು ದೇವಾಲಯಗಳಲ್ಲಿ ಉರುಳು ಸೇವೆ ನಡೆಸುವ ಹಾಸ್ಯಾಸ್ಪದ ಮತ್ತು ನಾಟಕೀಯ ಕ್ರಿಯೆಗಳು ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಮುಖ್ಯವಾಗಿ ಮಾಜೀ ಸಂಸತ್ ಸದಸ್ಯ ಮತ್ತು ಚುನಾವಣೆಗಳಲ್ಲಿ ಸೋತು ಈಗ ಬಹುತೇಕ ಮೂಲೆಗುಂಪಾಗಿರುವ ಜನಾರ್ಧನ ಪೂಜಾರಿಯವರು ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ಹಾಗೂ ಇತರ ದೈವದೇವರುಗಳಿಗೆ ಪ್ರಾರ್ಥಿಸಿ, ಉರುಳು ಸೇವೆಯನ್ನು ಆರಂಭಿಸಿದ್ದಾರೆ. ಇದರ ಹಿಂದೆ ಸೋನಿಯಾ ಗಾಂಧಿಯವರು ಗುಣಮುಖರಾಗಬೇಕೆಂಬ ಕಾಳಜಿಗಿಂತಲೂ ತಮ್ಮ ರಾಜಕೀಯ ಪುನರುಜ್ಜೀವನಕ್ಕೆ ಈ ಸಂದರ್ಭವನ್ನು  ಬಳಸಿಕೊಳ್ಳುವ ಪ್ರಯತ್ನವು ಕಾಣುತ್ತಿದೆ. ಇವರಿಗೆ ಹಿಂದೆ ಜೆಡಿಯಸ್‌ನಲ್ಲಿ ಇದ್ದು ಅಲ್ಲಿ ಬೇಳೆ ಬೇಯಿಸಲಾಗದೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡು ಗುರುತಿಸಿಕೊಳ್ಳಲು ಹವಣಿಸಿ ಪ್ರಚಾರ ಮತ್ತು ಒಲವು ಗಳಿಸಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿರುವ ಐವನ್ ಡಿಸೋಜರೂ ಸಾಥ್ ನೀಡಿದ್ದಾರೆ. ಅಲ್ಲದೆ ಇತರ ಕೆಲವು ಚೇಲಗಳನ್ನೂ ಸೇರಿಸಿ ಉರುಳಿದ್ದಾರೆ. ಶಾಸಕ ಯುಟಿ ಖಾದರ್‌ರವರೂ ಜತೆಗಿದ್ದು ಕಾರ್ಯಗಳಿಗೆ ಮೆರಗು ನೀಡಿದ್ದಾರೆ. ರಾಜಕಾರಣವನ್ನು ಯಾವುದೇ ಧರ್ಮದ ಹರಕೆಯಿಂದ ಸಾಧಿಸುವ ಮನೋಧರ್ಮವನ್ನು ಅನ್ಯಧರ್ಮೀಯರು ಹೇಗೆ ಸಮರ್ಥಿಸುವರೋ ತಿಳಿಯದು.

ಮೂಢನಂಬಿಕೆಗಳನ್ನು ಇನ್ನೂ ಪ್ರಮಾಣಿಕವಾಗಿ ಬಳಕೆಮಾಡುವ ಅವಿದ್ಯಾವಂತ, ಬಡ ಜನ ಸಮುದಾಯದವರು ಅನುಸರಿಸಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು, ರಾಜಕೀಯ ಕಾರ್ಯಕರ್ತರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮೂಢ ಕಾರ್ಯಾಚರಣೆಗಳ ಮೂಲಕ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣುವಾಗ ಅಸಹ್ಯವೆನಿಸುತ್ತದೆ, ಅದು ಅಕ್ಷಮ್ಯವಾಗುತ್ತದೆ. ಜನಾರ್ಧನ ಪೂಜಾರಿಯವರ ಮೊದಲನೆಯ ಪಾರ್ಲಿಮೆಂಟರಿ ಚುನಾವಣೆಯಿಂದ ತೊಡಗಿ ಕೊನೆಯ ಸೋಲಿನ ತನಕ ಕೂಲಂಕಶವಾಗಿ ಅಧ್ಯಯನ ಮಾಡಿ ತಿಳಿದುಕೊಂಡಿರುವ ನಮ್ಮಂಥವರಂತೂ ಅವರ ಈ ವರ್ತನೆಯನ್ನು ಖಂಡಿಸದೆ ಬಿಟ್ಟರೆ, ಮೂಢನಂಬಿಕೆಗೆ ಚಾಲನೆ ನೀಡುವ ಇಂತಹ ಆಟಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದರೆ ಅದಕ್ಕೆಲ್ಲ ಪರೋಕ್ಷ ಪ್ರೋತ್ಸಾಹ ನೀಡಿದಂತಾದೀತು. ಇನ್ನಾದರೂ ಇಂಥಾ ಮೂಢ ಕಾರ್ಯಾಚರಣೆಗಳ ಮೂಲಕ ಪ್ರಚಾರಪ್ರಿಯತೆಗೆ ಹವಣಿಸದೆ, ನೇರ ಮಾರ್ಗಗಳಲ್ಲಿ ಜನಪರ ಕಾರ್ಯಗಳನ್ನು ಕೈಗೆತ್ತಿ ಬಡಜನರ ಮೌಢ್ಯತೆಯನ್ನು ಹೋಗಲಾಡಿಸುವಂಥಾ ಕಾರ್ಯ ವೈಖರಿಯನ್ನು ರೂಪಿಸಿಕೊಂಡು ಕಾರ್ಯನಿರತರಾಗುವರೆಂದು  ಹಾರೈಸುತ್ತೇವೆ.

ಬಿನಾಯಕ್ ಸೆನ್ ಅವರನ್ನು ಬೆಂಬಲಿಸಿ

[dropcap]ಮಾ[/dropcap]ನವ ಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್‌ಸೇನ್ ಅವರಿಗೆ ಚತ್ತೀಸ್‌ಘಡ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದುದಕ್ಕೆ ವಿರುದ್ದವಾಗಿ ದೇಶದಾದ್ಯಂತ ಖಂಡನೆಗಳು ವ್ಯಕ್ತವಾಗಿವೆ. ಈ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿಯನ್ನು ಉಚ್ಛ ನ್ಯಾಯಾಲಯವೂ ತಿರಸ್ಕರಿಸಿತ್ತು. ಆ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಅವರು ನೀಡಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಅವರಿಗೆ ಜಾಮೀನು ನೀಡಿದೆ ಮಾತ್ರವಲ್ಲದೆ ಅವರು ಯಾವುದೇ ದೇಶದ್ರೋಹದ ಕೆಲಸವನ್ನು ಮಾಡಿರುವುದು ತೋರುವುದಿಲ್ಲ ಎಂದು ಪರಿಗಣಿಸಿ ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆಜ್ಞಾಪಿಸಿರುವುದು ಮಾನವ ಹಕ್ಕುಗಳ ಹೋರಾಟಗಾರರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿನಾಯಕ್‌ಸೇನ್ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದಕ್ಕೆ ಮತ್ತು ತನ್ನ ಬಿಡುಗಡೆಗೆ ಮಾನವ ಹಕ್ಕುಗಳ ಸಂರಕ್ಷಣೆಗೆ ತಾವು ನಡೆಸಿದ ಹೋರಾಟದ ಸಲುವಾಗಿ ತನಗೆ ದ.ಕೋರಿಯಾ ಸರಕಾರವು ನೀಡಿದ  ಪ್ರತಿಸ್ಠಿತ ಗ್ವಾಂಗ್ಜು ಪ್ರಶಸ್ತಿಯನ್ನು ಸ್ವೀಕರಿಸುವ ಸಂಧರ್ಭದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ನರಮೇಧ ಹಾಗೂ ಮಾನವ ಹಕ್ಕುಗಳ ದಮನದ ಬಗ್ಗೆ ತನ್ನ ಅನುಭವದ ಕಹಿ ಅನಿಸಿಕೆಗಳನ್ನು ವಿವರಿಸುತ್ತಾ ಮಾಡಿದ್ದ ಭಾಷಣವು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಓದಿರುವೆವು.

ಅವರು ಮಾಡಿದ್ದಾದರೂ ಏನು? ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರುವ ಹಾಗೆ ಮಾಡಲು ಪ್ರಭುತ್ವವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಕೈಜೋಡಿಸಿ ಗಣಿಗಾರಿಕೆಗೆ ಅರಣ್ಯಭೂಮಿಯನ್ನು ನೀಡಿ ಶತಮಾನಗಳಿಂದ ಅಲ್ಲಿ ವಾಸಮಾಡಿಕೊಂಡಿದ್ದ  ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡು ನಿರ್ವಸಿತರನ್ನಾಗಿ ಮಾಡಿರುವುದನ್ನು ವಿರೋಧಿಸುವವರೊಡನೆ ಕೈ ಜೋಡಿಸಿದ್ದಾಗಿದೆ. ನಗರದಲ್ಲಿ ಸಿಗಬಹುದಾದ ಐಶಾರಾಮಿ ಬದುಕನ್ನು ನಿರ್ಲಕ್ಷಿಸಿ ಎಲ್ಲಾ ನಾಗರಿಕ ಸೌಕರ್ಯಗಳಿಂದ ವಂಚಿತರಾದ ಅರಣ್ಯವಾಸಿಗಳಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಅವರ ಸಾವು ನೋವುಗಳಿಗೆ ಸ್ಪಂದಿಸುತ್ತಾ ಅವರ ಹಕ್ಕುಗಳ ಅರಿವನ್ನು ಅವರಿಗೆ ನೀಡುತ್ತಾ ಅವರೊಂದಿಗೆ ಬದುಕಿರುವುದೇ ಅಗಿದೆ. ಅವರ ಆ ಉದಾತ್ತ ಸೇವೆಗೆ ಪ್ರಭುತ್ವದಿಂದ  ಅವರಿಗೆ ದಕ್ಕಿದ ಪುರಸ್ಕಾರ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾವೋವಾದಿ, ದೇಶದ್ರೋಹಿ ಎಂದು ಪರಿಗಣಿಸಿ ಜೀವಾವಧಿ ಜೈಲು ಶಿಕ್ಷೆ! ಇಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಬಣ್ಣಿಸಿ ದಮನಿಸುವ ಕಾರ್ಯ ವೈಖರಿಯನ್ನು ಭಾರತದಿಂದ ತೊಡೆದು ಹಾಕಬೇಕೆಂದು ದೇಶದಾದ್ಯಂತ ಪ್ರಗತಿಪರ ಸಾರ್ವಜನಿಕ ಸಂಘಸಂಸ್ಥೆಗಳು, ಎಡಪಕ್ಷಗಳು ಚಳುವಳಿಯನ್ನು ಕೈಗೆತ್ತಿಗೊಳ್ಳಬೇಕೆಂದು ನಾವು ಹಾರೈಸುತ್ತೇವೆ.

ಬೀದಿ ನಾಯಿಗಳ ಕಾಟ

[dropcap]ಬೆಂ[/dropcap]ಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯೊಳಗೆ ಮಾನವರಿಗಿಲ್ಲದ ರಕ್ಷಣೆಯನ್ನು ಬೀದಿ ನಾಯಿಗಳಿಗೆ ಪ್ರಾಣಿದಯೆಯ ಹೆಸರಲ್ಲಿ ನಗರಾಡಳಿತವು ನೀಡುತ್ತಿರುವುದು ಕೂಲಿನಾಲಿ ಮಾಡಿಕೊಂಡು ಬದುಕುತ್ತಿರುವ ಕಡು ಬಡವರ ಪಾಲಿಗೆ ಮಾರಕವಾಗಿದೆ. ಇವರ ಮಕ್ಕಳಿಗೆ ಯಾರ ದಯೆಯೂ ಇಲ್ಲ, ಯಾರ ರಕ್ಷಣೆಯೂ ಇಲ್ಲ, ಯಾರ ಪೋಷಣೆಯೂ ಇಲ್ಲ ಎಂದಾಗಿರುವುದು ಆಡಳಿತದ ಧೋರಣೆಯ ಪರಿಣಾಮವಾಗಿದೆ. ಹಳ್ಳಿಗಾಡುಗಳಿಂದ ಹೊಟ್ಟೆಹೊರೆಯಲು ನಗರ ವ್ಯಾಪ್ತಿಯೊಳಗೆ ಬಂದು ಕೂಲಿ ನಾಲಿಯ ಕೆಲಸ ಮಾಡಿಕೊಂಡು ಅಂಗಡಿ ಮುಂಗ್ಗಟ್ಟುಗಳಲ್ಲಿಯೋ ರಸ್ತೆ ಬದಿಗಳಲ್ಲಿಯೋ ಅರೆ ಬರೆ ನಿರ್ಮಾಣವಾಗಿರುವ ಕಟ್ಟಡಗಳ ಇಟ್ಟಿಗೆ ರಾಶಿಗಳೊಳಗೋ ಆಶ್ರಯ ಪಡೆಯುವ ಬಡ ಕೂಲಿ ಕಾರ್ಮಿಕರು ಬೀದಿ ನಾಯಿಗಳ ಕಾಟಗಳಿಗೆ ಬಲಿಯಾಗುತ್ತಿದ್ದಾರೆ, ಅವರ ಹಸುಳೆಗಳನ್ನು ನಾಯಿಗಳು ಎಳೆದೊಯ್ದು ಭಕ್ಷಿಸುತ್ತವೆ. ಇದೇ ಜನೆವರಿ 19ರ ವರದಿಯಂತೆ ಕೆಲವು ನಾಯಿಗಳು ಯಲಹಂಕ ಶಾಲೆಯೊಂದರ ಒಳ ಹೊಕ್ಕು ಅಲ್ಲಿದ್ದ ಕೆಲವು ವಿದ್ಯಾರ್ಥಿಗಳನ್ನೂ  ಶಿಕ್ಷಕರನ್ನೂ ಕಚ್ಚಿ ಘಾಸಿಗೊಳಿಸಿವೆ. ಇಂತಹ ವರದಿಗಳು ಪದೇ ಪದೇ ಪ್ರಕಟವಾಗುತ್ತಲೇ ಇರುತ್ತವೆ. ಜನರು ಪ್ರತಿಭಟನೆ ನಡೆಸಿ ನಗರ ಪಾಲಿಕೆಗೆ ಛೀಮಾರಿ ಹಾಕಿ ತಣ್ಣಗಾಗುತ್ತಾರೆ. ಆದರೆ ಇಂತಹ ಅರಕ್ಷಿತ ಸ್ಥಿತಿಯನ್ನು ಕೊನೆಗಾಣಿಸಲು ಕೈಗೊಳ್ಳುವ ಕ್ರಮಗಳಾವುವೂ ಕಳೆದ ಕೆಲವು ವರ್ಷಗಳಿಂದ ನಮಗೆ ಕಾಣುತ್ತಿಲ್ಲ. ಶ್ರೀಮತಿ ಮೇನಕಾ ಗಾಂಧಿಯವರ ಕಾರುಬಾರಿನಲ್ಲಿ ಅನುಷ್ಠಾನಗೊಂಡ ಬೀದಿ ನಾಯಿಗಳ ಪ್ರಾಣಿ ದಯೆಯ ಕಾನೂನಿನಡಿಯಲ್ಲಿ, ಮಾನವರ ಪಾಲಿಗೆ ಕನಿಷ್ಠ ರಕ್ಷಣೆಯನ್ನೂ, ದುಡಿದು ಬದುಕುವ ಹಕ್ಕನ್ನೂ ಕೊಡಲಾಗದ ನಮ್ಮ ರಾಜ್ಯದಲ್ಲಿ ಬೀದಿ ನಾಯಿಗಳ ಮೇಲೆ ಪ್ರೀತಿ, ಮಮಕಾರವನ್ನು ತೋರಲು ಆಳುವವರು ಗುತ್ತಿಗೆದಾರರನ್ನು ನೇಮಿಸಿ ಅವರನ್ನು ಕೊಬ್ಬಿಸಿ ತಮ್ಮ ಪಾಲನ್ನು ದೃಢೀಕರಿಸಿ ಸಂತುಷ್ಠರಾಗಿರುತ್ತಾರೆ.

ಈಗ ಹೇಗೂ ಮೇನಕಾ ಗಾಂಧಿಯವರನ್ನು ಜನರು ಅಧಿಕಾರದಿಂದ ತೊಲಗಿಸಿದ್ದಾರೆ. ಅವರ ಸುಪುತ್ರನೂ ಮೂಲೆ ಗುಂಪಾಗಿದ್ದಾನೆ. ಆದರೆ ಅವರು ರೂಪಿಸಿದ ಕಾನೂನಿನ ಲಾಭ ಪಡೆಯಲು ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಮುಖ್ಯವಾಗಿ ರೇಬಿಸ್ ರೋಗದ ಚುಚ್ಚುಮದ್ದನ್ನು ಉತ್ಪಾದಿಸುವ  ಕಂಪೆನಿಗಳು ಹವಣಿಸುತ್ತಿದ್ದಾರೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾದಂತೆ ವರ್ಷವೊಂದರಲ್ಲಿ ಲಕ್ಷಾಂತರ ಮಂದಿ ಹುಚ್ಚು ನಾಯಿ ಕಡಿತಕ್ಕೊಳಗಾಗುತ್ತಾರೆ. ತಮ್ಮ ದಂಧೆಯ ಶ್ರೇಯಸ್ಸಿಗಾಗಿ ಗಣಿ ಧಣಿ ಗಳಂತೆ ಲಾಬಿ ಮಾಡಿಕೊಂಡು ಆ ಕಂಪೆನಿಗಳು ಸಾಕಷ್ಟು ಹಣವನ್ನು ನಾಯಿ ಪ್ರಿಯ ಸಂಘ ಸಂಸ್ಥೆಗಳ ಮುಖಂಡರಿಗೆ ಒಪ್ಪಿಸುತ್ತಾರೆ. ನಾಯಿಗಳ ಸಂಖ್ಯೆ ಹೆಚ್ಚಿದಷ್ಠು ಅವರಿಗೆ ಲಾಭ ಹೆಚ್ಚುತ್ತದೆ. ಆದುದರಿಂದ ಅದರ  ಬಾಧಕಗಳೇನೇ ಇರಲಿ ಆ ಕಾನೂನನ್ನು ಬದಲಾಯಿಸದಂತೆ ಅವರು ಬಲವಾಗಿ ಪ್ರತಿಭಟಿಸುತ್ತಾರೆ. ಈಗಿನ ವ್ಯವಸ್ಥೆಯಂತೆ ಬೀದಿನಾಯಿಗಳನ್ನು ಹಿಡಿದು ಕೊಂಡೊಯ್ದು ಸಂತಾನ ಹರಣ ಚಿಕಿತ್ಸೆಗೈದು ಅದೇ ಜಾಗಕ್ಕೆ ಮರಳಿ ಬಿಡಲಾಗುವುದು. ಅವರ ಲೆಕ್ಕಾಚಾರ ಪ್ರಕಾರ ಅವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಕೊನೆಗೆ ಶೂನ್ಯವಾಗಬೇಕು. ಆದರೆ ಈಗಿನ ಅನುಭವದ ಪ್ರಕಾರ ಮತ್ತು ಅಧಿಕಾರಿಗಳೇ ಇತ್ತೀಚೆಗೆ ಕೊಟ್ಟ ಲೆಕ್ಕದ ಪ್ರಕಾರ ಅವುಗಳ ಸಂಖ್ಯೆ ದಿನೇ ದಿನೇ ಅಧಿಕಗೊಳ್ಳುತ್ತಾ  ದ್ವಿಗುಣ ಗೊಂಡಿದೆಯಂತೆ. ಜನರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದರೂ ನಾಯಿಗಳು ಬಲಿಷ್ಠಗೊಂಡು  ಸಂಖ್ಯೆಯಲ್ಲಿ ಅಧಿಕಗೊಳ್ಳುತ್ತಾ ಜನಸಾಮಾನ್ಯರಿಗೆ, ಮುಖ್ಯವಾಗಿ ದುರ್ಬಲ ವರ್ಗದ ಕೂಲಿ ಕಾರ್ಮಿಕರಿಗೆ, ದುಸ್ವಪ್ನವಾಗಿ ಕಾಡುತ್ತಿವೆ. ಅವುಗಳಿಂದಾಗಿ ಹಲವಾರು ದುರ್ಘಟನೆಗಳು ಸಂಭವಿಸಿದವು, ಕೆಲವು ಜೀವಗಳು ಬಲಿಯಾದವು. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತು ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ. ಯಾವುದೋ ಕಾರಣ ಹುಡುಕಿ ಯಾರ ಮೇಲೆಯೋ ಗೂಬೆ ಕೂರಿಸುವುದು ಬೇಡ. ನಾಯಿಗಳ ಜೀವ ಅಮೂಲ್ಯವಲ್ಲ. ಅದೂ ಒಂದು ಪ್ರಾಣಿ ಅಷ್ಟೇ. ಪ್ರಾಣಿ ಹಿಂಸೆ ಮಾಡುವುದು ಬೇಡ. ಆದರೆ ಅವುಗಳಿಗಿಂತ ಮನುಷ್ಯರ ಜೀವ ಅಮೂಲ್ಯ ಅವರ ಬದುಕುವ ಮತ್ತು ದುಡಿಯುವ ಹಕ್ಕುಗಳನ್ನು ಗೌರವಿಸ ಬೇಕಿದೆ. ಐಷರಾಮಿ ಬದುಕು ನಡೆಸುತ್ತಿರುವ ಮತ್ತು  ತಮ್ಮ ಮೋಜಿಗೆ ಸಂಘಗಳನ್ನು ಕಟ್ಟಿಕೊಂಡಿರುವ ಪ್ರಾಣಿದಯಾ ಸಂಘದವರಿಗೆ ಬಾಗಿಲು ರಹಿತ ಕೊಂಪೆಗಳಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರ ಬವಣೆ ಅರ್ಥವಾಗದು  ತಮಗಿರುವ ಪ್ರಾಣಿದಯೆ ಯನ್ನು ಕಾರ್ಯ ರೂಪಕ್ಕೆ ತರುವ ಜವಾಬ್ದಾರಿ ತಮಗೆ ಇದೆ ಎಂದು ಭಾವಿಸುವುದಾದರೆ ತಮ್ಮ ಸಂಘದ ಮೂಲಕ ತಮ್ಮದೇ ಒಂದು ನಿವೇಶನವನ್ನು ನಿರ್ಮಿಸಿ ಸಾಧ್ಯವಾದಷ್ಟು ಸಂಖ್ಯೆಯ ನಾಯಿಗಳನ್ನು ದತ್ತು ಪಡೆದು ತಮ್ಮ ಅಧೀನದಲ್ಲಿರಿಸಿ ಸಾಕಲಿ. ಮಿಕ್ಕವುಗಳನ್ನು ದಯಾ ಮರಣಕ್ಕೆ ಒಳಪಡಿಸಲಿ.  ಎಷ್ಟು ಮಾತ್ರಕ್ಕೂ ಬೀದಿಗಳಲ್ಲಿ ನಾಯಿಗಳನ್ನು ಬಿಡುವುದನ್ನು ವಿರೋಧಿಸಬೇಕಾಗುತ್ತದೆ.