ಮೊದಲ ಪಾರ್ಲಿಮೆಂಟಿನ ಸದಸ್ಯನಾಗಿ ನನ್ನ ಅನುಭವಗಳು

(ಕೃಪೆ: ಹೊಸತು ಮಾಸ ಪತ್ರಿಕೆ, ಜೂನ್ 2012) (ಬರೆದದ್ದು: ಮೇ 18, 2012; ಇದು ಬಿ ವಿ ಕಕ್ಕಿಲ್ಲಾಯರ ಕೊನೆಯ ಲೇಖನ)

[dropcap]ಭಾ[/dropcap]ರತ ಕಮ್ಯೂನಿಸ್ಟ್ ಪಕ್ಷದ, ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ಪಕ್ಷದ ಕೇಂದ್ರದ ನಿರ್ದೇಶನದಂತೆ ನನ್ನನ್ನು ಮದ್ರಾಸ್ ಎಸೆಂಬ್ಲಿಯಿಂದ 1952ರಲ್ಲಿ ಮೊದಲ ರಾಜ್ಯ ಸಭೆಗೆ ಆಯ್ಕೆಗೊಳಿಸಲಾಗಿತ್ತು. ಆಗ ನನ್ನ ವಯಸ್ಸು ಮೂವತ್ತ ಮೂರು ವರ್ಷಗಳು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ದೃಢವಾದ ನಂಬಿಕೆಯಿದ್ದ ಪಂಡಿತ್ ಜವಾಹರಲಾಲ್ ನೆಹರೂರವರು ಪ್ರಧಾನಿಯಾಗಿಯೂ, ಮಹಾನ್ ವಿದ್ವಾಂಸರಾಗಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ ಉಪರಾಷ್ಟ್ರಪತಿಗಳೂ, ರಾಜ್ಯಸಭೆಯ ಸಭಾಪತಿಗಳೂ ಆಗಿದ್ದ ಆ ಸಂದರ್ಭದಲ್ಲಿ ಆ ಸದನದ ಸದಸ್ಯನಾದುದು ಯುವಕನಾಗಿದ್ದ ನನ್ನಂತಹವನೊಬ್ಬನಿಗೆ ಪಕ್ಷವು ಒದಗಿಸಿದ ಸದವಕಾಶವೇ ಆಗಿತ್ತು. ದ.ಕ. ಜಿಲ್ಲೆಯ ಓರ್ವ ಕಾರ್ಯಕರ್ತನೆಂಬ ನೆಲೆಯಲ್ಲಿ ನನಗೆ ರಾಜ್ಯ ಸಭೆಯ ಸದಸ್ಯತ್ವವನ್ನು ನೀಡಲಾಗಿದ್ದುದರಿಂದ ನಾನು ರಾಜ್ಯ ಸಭೆಯಲ್ಲಿ ಓರ್ವ ಕನ್ನಡಿಗನಾಗಿ ಆ 2 ವರ್ಷಗಳ ಕಾಲಾವಧಿಯನ್ನು ಸದುಪಯೋಗ ಪಡಿಸಿಕೊಂಡಿರುವೆನೆಂಬ ತೃಪ್ತಿಯು ನನಗಿದೆ. ಆ ಎರಡು ವರ್ಷಗಳಲ್ಲಿ ರಾಜ್ಯದ ಬರಗಾಲದ ಬಗ್ಗೆ, ಆಹಾರದ ಕೊರತೆಯ ಸಮಸ್ಯೆಗಳ ಬಗ್ಗೆ, ಕೋಲಾರ ಚಿನ್ನದ ಗಣಿಗಳ ರಾಷ್ಟ್ರೀಕರಣದ ಬಗ್ಗೆ, ಹಾಸನ-ಮಂಗಳೂರು ರೈಲು ಮಾರ್ಗದ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಬಗ್ಗೆ ಒತ್ತಾಯಿಸಿ ವಿವಿಧ ಚರ್ಚೆಗಳಲ್ಲಿ ನಾನು ಭಾಗವಹಿಸಿದ್ದೆ. ರಾಜ್ಯದ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿಯೂ, ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದಲೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆ; ಬರ ಪರಿಹಾರವನ್ನು ಒತ್ತಾಯಿಸುವುದಕ್ಕಾಗಿ, ಆಹಾರ ಪೂರೈಕೆಯನ್ನು ಉತ್ತಮ ಪಡಿಸಬೇಕೆಂದು ಒತ್ತಾಯಿಸುವುದಕ್ಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಪಕ್ಷವು ಸಂಘಟಿಸಿದ್ದ ಚಳುವಳಿಗಳಲ್ಲೂ ನಾನು ಭಾಗವಹಿಸಿದ್ದೆ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಎನ್ ಕೆ ಉಪಾಧ್ಯಾಯ ಮತ್ತು ಸಂಗಡಿಗರೊಂದಿಗೆ ರಾಜ್ಯದಾದ್ಯಂತ ಪ್ರವಾಸಗೈದ ಆ ಅನುಭವವು ಮರೆಯಲಾಗದ್ದು.

ಹಿಂದಿಯ ಮತ್ತು ಆಂಗ್ಲಭಾಷೆಯ ಜ್ಞಾನವಿರದ, ಮಲೆಯಾಳಿ ಭಾಷೆಯನ್ನು ಮಾತ್ರ ಮಾತನಾಡಬಲ್ಲ ನಮ್ಮ ಪಕ್ಷದ ಸದಸ್ಯರೊಬ್ಬರು ಮದ್ರಾಸ್ ಎಸೆಂಬ್ಲಿಯಿಂದಲೇ ಚುನಾಯಿತರಾಗಿ ರಾಜ್ಯ ಸಭೆಯಲ್ಲಿದ್ದರು. ಅಧ್ಯಕ್ಷರ ಅನುಮತಿಯನ್ನು ಕೋರಿ, ತನ್ನ ವಿಷಯಗಳನ್ನು ಮಂಡಿಸುತ್ತಾ ಮಲೆಯಾಳಿ ಭಾಷೆಯಲ್ಲಿ ಅವರು ಮಾಡಿದ್ದ ಭಾಷಣವನ್ನು ನಾನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದೆನು. ಆ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್‘ರವರು ಸಭಾಧ್ಯಕ್ಷರಾಗಿಯೂ, ಪಂಡಿತ್ ಜವಾಹರಲಾಲ್ ನೆಹರೂರವರು ಸಭಾನಾಯಕರಾಗಿಯೂ ಸಭೆಯಲ್ಲಿ ಉಪಸ್ಥಿತರಾಗಿದ್ದರು. ನೆಹರೂರವರು ನನ್ನ ಆಂಗ್ಲ ಭಾಷಣದ ಧಾಟಿಯನ್ನೂ, ಮಂಡಿಸಿದ ಬೇಡಿಕೆಗಳ ವಿವರಣೆಗಳ ಕ್ರಮವನ್ನೂ ಕೇಳಿ ಅವರ ಭಾಷಣದಲ್ಲಿ ನನ್ನ ಕೃತ್ಯಕ್ಕೆ ಮುಕ್ತ ಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಮ್ಮ ಕೋರಿಕೆಗೆ ಅವರ ಒಪ್ಪಿಗೆಯನ್ನು ಸೂಚಿಸಿದ್ದರು. ಇದು ನನಗೆ ದೊರೆತ ಅಪೂರ್ವ ಸುಸಂಧರ್ಭವೆಂದು ನಾನು ಭಾವಿಸುತ್ತೇನೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ನಾನು ಕಾಂಗ್ರೆಸೇತರರು ಸಂಘಟಿಸಿದ್ದ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ (ಅಕರಾನಿಪ) ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವೆನು. ಹುಬ್ಬಳ್ಳಿಯಲ್ಲಿ ಅಕರಾನಿಪ ಸದಸ್ಯರು ಹಮ್ಮಿ ಕೊಂಡಿದ್ದ ಒಂದು ಚಳುವಳಿಯನ್ನು ಅಲ್ಲಿನ ಕಾರ್ಯಕರ್ತರು ಬೃಹತ್ ಚಳುವಳಿಯಾಗಿ ನಡೆಸಿದ ಸಂದರ್ಭದಲ್ಲಿ,  ಸಮಿತಿಯ ಮುಖ್ಯ ಸಂಘಟಕರಾಗಿದ್ದ ಸಿಪಿಐ ನಾಯಕ ಎ ಜೆ ಮುಧೋಳ್ ಮತ್ತಿತರ  ಹಲವಾರು ಸದಸ್ಯರನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಮೂಲಕ ವಿಷಯವನ್ನು  ಮಂಡಿಸಿ ಬಂಧಿತರಾಗಿದ್ದ ಎಲ್ಲರ ಬಿಡುಗಡೆ ಮತ್ತು ಕರ್ನಾಟಕ ಏಕೀಕರಣಕ್ಕೆ ಸಹಾನುಭೂತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದೆನು. ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಭಾಗವಹಿಸುತ್ತಾ ಕೇರಳದವನಾಗಿ ಪರಿಚಯಿಸಿಕೊಳ್ಳುವ ಅಭಿಲಾಷೆಯನ್ನು ನಾನು ಎಂದೂ ಪ್ರಕಟಿಸಿರಲಿಲ್ಲ. ನನ್ನ ಪಕ್ಷವು ಸಹಾ ನನ್ನನ್ನು ಒಬ್ಬ ಕರ್ನಾಟಕದ ಕಾರ್ಯಕರ್ತನೆಂದು ಪರಿಗಣಿಸಿತ್ತಲ್ಲದೆ ಬೇರಾವುದೇ ಭಾಷೆ, ಯಾ ಪ್ರಾಂತ್ಯಕ್ಕೆ ಸೇರಿದವನೆಂದು ಪರಿಗಣಿಸಿರಲಿಲ್ಲವಾದ್ದರಿಂದ ನಾನು ಇಂದಿಗೂ ಕರ್ನಾಟಕದವನಾಗಿಯೇ ಉಳಿದಿದ್ದೇನೆ.

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

(ಬರೆದದ್ದು ಜನವರಿ 10, 2012)

ಮಾನ್ಯ ಜಿಲಾಧಿಕಾರಿಗಳು,
ದ ಕ ಜಿಲ್ಲೆ, ಮಂಗಳೂರು.
ಇವರಿಗೆ

ಮಾನ್ಯರೇ,

ವಿಷಯ: 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

ತಮ್ಮ ಆಶ್ರಯದಲ್ಲಿ ಇದೇ ತಿಂಗಳ ದಿ.12 ರಿಂದ 16 ರವರೆಗೆ ಜರುಗುವ 17ನೇಯ ರಾಷ್ಟ್ರೀಯ ಯುವಜನೋತ್ಸದಲ್ಲಿ ಪಾಲ್ಗೊಳ್ಳಲು ತಾವು ನನಗೆ ಕಳುಹಿಸಿದ ಆಮಂತ್ರಣವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಅನಾರೋಗ್ಯದ ನಿಮಿತ್ತ ಸದರಿ ಉತ್ಸವಕ್ಕೆ ಖುದ್ದಾಗಿ ಹಾಜರಾಗಲು ಅಸಮರ್ಥನಾದುದರಿಂದ ತಮ್ಮ ಕಾರ್ಯಕ್ಕೆ ಈ ಶುಭಕಾಮನೆಗಳನ್ನು ಕಳುಹಿಸುತ್ತಿದ್ದೇನೆ.

ನಮ್ಮ ಯುವಜನರು ದೇಶದ ಪ್ರಗತಿಪರ, ರಚನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಮೂಢನಂಬಿಕೆ, ಜಾತಿಬೇಧ, ಕೋಮು ವೈಷಮ್ಯ, ಪ್ರಾಂತೀಯ ಸಂಕುಚಿತ ಭಾವನೆಗಳೆಲ್ಲವುಗಳನ್ನು ಹಿಮ್ಮಟ್ಟಿ, ಜಾತ್ಯಾತೀತ, ವರ್ಗಬೇಧ, ಶೋಷಣೆ  ಭ್ರಷ್ಟಾಚಾರ ರಹಿತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಈ ಉತ್ಸವವು ಪ್ರೇರೇಪಣೆಯಾಗಲಿ ಎಂಬ ಹೆಬ್ಬಯಕೆಯಿಂದ ಉತ್ಸವಕ್ಕೆ ನನ್ನ ಶುಭಕಾಮನೆಗಳನ್ನು ಕೋರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಬಿ ವಿ ಕಕ್ಕಿಲ್ಲಾಯ.

ರಷ್ಯಾದಲ್ಲಿ ಭಗವದ್ಗೀತೆಯ ವಿವಾದ

ಭಗವದ್ಗೀತೆಯ ಬಗ್ಗೆ ಎದ್ದಿರುವ ವಿವಾದದ ಕುರಿತು 2 ಮಾತುಗಳು: (ಬರೆದದ್ದು: ದಿಸೆಂಬರ್ 27, 2011)

[dropcap]ರ[/dropcap]ಷ್ಯದಲ್ಲಿ ಭಗವದ್ಗೀತೆ  ರಷ್ಯನ್ ಭಾಷೆಯಲ್ಲಿ ಅನುವಾದಿಸಿ ಪ್ರಕಟಗೊಂಡಿದ್ದು, ಅದರಲ್ಲಿ  ಹೇಳಲ್ಪಟ್ಟ ಕೆಲವು ಅಪ್ರಿಯ ಬೋಧನೆ, ಹಿಂಸೆ ಮತ್ತು ಜಾತೀಯತೆಯ ಪ್ರತಿಪಾದನೆ ಇತ್ಯಾದಿಗಳಿಗಾಗಿ ಅದನ್ನು ನಿಷೇಧಿಸಲು ಅಲ್ಲಿನ ನ್ಯಾಯಾಲಯದಲ್ಲಿ ಕೆಲವು ನಾಗರಿಕರು ದಾವೆಯನ್ನು ಹೂಡಿದ್ದಾರೆ. ನ್ಯಾಯಾಲಯದ ತೀರ್ಮಾನವನ್ನು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೆಲವು ಬಲ ಪಂಥೀಯ ಮತ್ತು ಧರ್ಮಾಂಧ ಸಂಸದರು ಸಂಸತ್ತಿನಲ್ಲಿ ಒಂದು ಸುಳಿಗಾಳಿಯನ್ನೇ ಎಬ್ಬಿಸಿದ್ದಾರೆ. ಪ್ರಾಮುಖ್ಯವಾದ ಲೋಕಪಾಲ ಮಸೂದೆ, ಆಹಾರ ಭದ್ರತಾ ಮಸೂದೆ ಮತ್ತಿತರ ಪ್ರಸ್ತುತ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ  ಪ್ರಮುಖ ವಿಧೇಯಕಗಳು ಚರ್ಚೆಗೆ ಬರುತ್ತಿರುವಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಿದೆಂದು ತಿಳಿಯಬೇಕಾಗಿದೆ. ಎದುರಾಳಿಗಳನ್ನು ದಮನಿಸಲು ತಮ್ಮ ಬತ್ತಳಿಕೆಯಲ್ಲಿರುವ ಆಯುಧಗಳು ಬರಿದಾದಾಗ ಪ್ರತಿಗಾಮಿ ಶಕ್ತಿಗಳು ತಮ್ಮ ಕೊನೆಯ ಅಸ್ತ್ರವನ್ನಾಗಿ ಭಗವದ್ಗೀತೆಯನ್ನು ಉಪಯೋಗಿಸಿ ದಾರಿ ತಪ್ಪಿಸುವುದು ಸಾಮಾನ್ಯವಾಗಿದೆ. ಅದೇ ತಂತ್ರವನ್ನು ಈಗಲೂ ಉಪಯೋಗಿಸಿದಂತಿದೆ. ರಷ್ಯಾದ ಹಿಂದುಳಿದ ಸೈಬೀರಿಯ ಪ್ರದೇಶದ ಒಂದು ಸಣ್ಣ ಊರಲ್ಲಿ ಇಸ್ಕಾನ್ ಎಂಬ ಸಂಸ್ಥೆಯೊಂದು ನಡೆಸುತ್ತಿರುವ ಕಾರ್ಯಾಚರಣೆಯ ಅಂಗವಾಗಿ ಅಲ್ಲಿನ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಚರ್ಚೆಯಲ್ಲಿ ನಮ್ಮ ಸರಕಾರ ಮತ್ತು ಸಂಸತ್ತು ಮುಳುಗಬೇಕೇ? ಅಲ್ಲಿಯ ಜನರು ಮತ್ತು ನ್ಯಾಯಾಲಯಗಳು ನಮ್ಮ ಗ್ರಂಥಗಳಿಗೆ ನಿಷ್ಠರಾಗಿರಬೇಕೆಂದು ನಾವು ನಿರೀಕ್ಷಿಸಬಹುದೇ?

ಇಷ್ಟಕ್ಕೂ ಭಗವದ್ಗೀತೆಯಲ್ಲಿ ಭೋಧಿಸಲ್ಪಟ್ಟ ಕೆಲವು ಬೋಧನೆಗಳನ್ನು ಗಮನಿಸಿದರೆ ಅದು ಎಷ್ಟು ಹಿಂಸಾತ್ಮಕ, ಅಮಾನವೀಯ ಮತ್ತು ಪ್ರಸ್ತುತ ಜನಜೀವನಕ್ಕೆ ಮಾರಕವೆಂದು ಮನಗಾಣಬಹುದು.  ಅರ್ಜುನನು ಯುದ್ಧದಿಂದ ವಿಮುಖನಾದಾಗ ಶ್ರೀಕೃಷ್ಣನು ಅವನನ್ನು ಯುದ್ಧಕ್ಕೆ ಪ್ರಚೋದಿಸುತ್ತಾ “ಯುದ್ಧವನ್ನು ನೀನು ಮಾಡದೇ ಹೋದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀಯಾ; ಚಾತುರ್ವಣ್ಯವೆಂಬ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳನ್ನು  ಸೃಷ್ಟಿಸಿದವನು ನಾನು; ಯಾವಾಗಲೆಲ್ಲಾ (ಚಾತುರ್ವಣ್ಯ) ಧರ್ಮಕ್ಕೆ ಹಾನಿಯುಂಟಾಗುವುದೋ ಅವಾಗಲೆಲ್ಲಾ, ದುಷ್ಕರ್ಮಿಗಳನ್ನು ನಾಶಗೊಳಿಸಲು ಮತ್ತು  ಚಾತುರ್ವಣ್ಯ ಧರ್ಮವನ್ನು  ರಕ್ಷಿಸಲು ನಾನು ಕಾಲಕಾಲಕ್ಕೆ ಹುಟ್ಟಿಬರುತ್ತೇನೆ” ಎಂದ ಉಕ್ತಿಗಳು ಜಾತ್ಯಾತೀತ, ಧರ್ಮ ನಿರಪೇಕ್ಷಿತ, ವರ್ಗರಹಿತ ಸಮಾಜ ನಿರ್ಮಾಣದ ನಮ್ಮ ಸಂವಿಧಾನದ ಮೂಲ ಆಶಯಕ್ಕೇ ತದ್ವಿರುದ್ಧವಾಗಿದೆ.  ಚಾತುರ್ವಣ್ಯವನ್ನು ವಿರೋಧಿಸುವ ಅಹಿಂದುಗಳನ್ನು ದುಷ್ಕರ್ಮಿಗಳೆಂದೂ ಮತ್ತು ಅವರನ್ನು ನಾಶ ಮಾಡಲು ಶ್ರೀಕೃಷ್ಣನು ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ಎಂದು ಅರ್ಥೈಸಬೇಕಲ್ಲವೇ? ಹಾಗಿರುವಾಗ ಬೇರಾವುದೋ ದೇಶದಲ್ಲಿ ಅಲ್ಲಿಯ ಸಂವಿಧಾನಕ್ಕೆ ಅನುಗುಣವಾಗಿ ಹಿಂಸೆ, ಅನೀತಿ, ಅಮಾನವೀಯತೆಯನ್ನು ವೈಭವೀಕರಿಸುತ್ತಿರುವ ಭಗವದ್ಗೀತೆಯನ್ನು ಅಲ್ಲಿಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದುದ್ದನ್ನು ನಾವಿಲ್ಲಿ ಪ್ರತಿಭಟಿಸುವುದು  ಸಮಂಜಸವೇ? ನಮ್ಮಲ್ಲಾದರೂ ಇಷ್ಟ ಇದ್ದವರು ಅದನ್ನು ಪಠಿಸಲಿ. ಆದರೆ ಅದರಲ್ಲಡಗಿರುವ ಹಿಂಸೆಯನ್ನು ಮತ್ತು ಚಾತುರ್ವಣ್ಯ ಜಾತಿ ಪದ್ಧತಿಯನ್ನು ಬೋಧಿಸುವುದು ಮತ್ತು ಆಚರಿಸುವುದು ಸಂವಿಧಾನ ಬಾಹಿರವಾದುದು ಎಂದು ಮನಗಾಣಬೇಕು.