ಸರಕಾರವೇ ಪೌರ ಕಾರ್ಮಿಕರನ್ನು ಆತ್ಮಹತ್ಯೆಗೆ ತಳ್ಳಿದೆ

[dropcap]ಗು[/dropcap]ಲ್ಬರ್ಗ ಪೌರ ಆಡಳಿತ ಕಛೇರಿಯ ಮುಂದೆ ಇಂದಿಗೆ 27 ದಿನಗಳಿಂದ ನಗರದ ಪೌರ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಯಾಕೆ?  2 ವರ್ಷಗಳಿಂದ ಕಾನೂನಿನ ಪ್ರಕಾರ ನೀಡಬೇಕಿದ್ದ ಯಾವ ಸವಲತ್ತುಗಳನ್ನೂ ಅವರಿಗೆ ನೀಡದೆ, ದುಡಿಸಿ ಸಂಬಳವನ್ನೂ ಕೊಡದೆ, ಉಪವಾಸ ಕೆಡವಿರುವ ನಗರ ಸಭಾ ಆಡಳಿತದ ವಿರುದ್ಧ ಅವರು ತಮ್ಮ ಜೀವವನ್ನೇ ಪಣವಿಟ್ಟು ಉಪವಾಸ ಹೂಡಿದ್ದಾರೆ. ಸರಕಾರವೇ ಅವರನ್ನು ಆತ್ಮಹತ್ಯೆಗೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಸಹಾ ಆತ್ಮಹತ್ಯೆಗೆ ಪ್ರೇರಣೆ ಮತ್ತು ಒತ್ತಡ ಹೇರಿದ ಅಪರಾಧಕ್ಕೆ ಹೊಣೆಗಾರರಾಗಿದ್ದಾರೆ.  ಶಿಕ್ಷಾರ್ಹರೂ ಆಗುತ್ತಾರೆ. ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಗುಲ್ಬರ್ಗ ಜಿಲ್ಲೆಯವರೇ ಆಗಿದ್ದು ಕಾನೂನು ಪ್ರಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಉಪವಾಸ ಸತ್ಯಾಗ್ರಹದ ನಡುವೆ ಮರಣ ಹೊಂದಿರುವ ದಲಿತ ಕಾರ್ಮಿಕ ಮಹಿಳೆಯ ವಿಚಾರವನ್ನು ಕೇಂದ್ರ ಸರಕಾರ ತನಿಖೆಗೆ ಒಳಪಡಿಸಿ ಅದಕ್ಕೆ ಕಾರಣರಾಗಿರುವರ ಅಸಡ್ಡೆ ಇನ್ನು ಮರುಕಳಿಸದಂತೆ ಕಾನೂನನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ಕಾರ್ಮಿಕರನ್ನು ದುಡಿಸಿ ನ್ಯಾಯವಾದ ವೇತನ ಮತ್ತಿತರ ಸವಲತ್ತುಗಳನ್ನು ಕೊಡದೆ ಸಾಯಿಸುವ ಮಂದಿ ಕರ್ನಾಟಕದಲ್ಲಿ ಅಧಿಕಾರದ ಮರೆಯಲ್ಲಿ ಸಾಕಷ್ಟು ಇದ್ದಾರೆ ಎಂಬ ವಿಚಾರ ಬಯಲಾಗಿದೆ. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅಂಬವ್ವ ಎಂಬ ದಲಿತ  ಮಹಿಳೆ ಸತ್ಯಾಗ್ರಹದ ಮೊದಲನೆಯ ಹುತಾತ್ಮರಾಗಿದ್ದಾರೆ. ಅವರನ್ನು ಬೆಂಬಲಿಸಿದ ಮತ್ತು ನ್ಯಾಯಕ್ಕಾಗಿ ಶಾಂತಿಯುತ ಸುಸಂಘಟಿತ ನ್ಯಾಯಬದ್ದ ಹೋರಾಟ ನಡೆಸಿದವರಿಗೆ ಬೆಂಬಲ ನೀಡಿದ್ದ ಮಾಜಿ ಕಾರ್ಮಿಕ ಸಚಿವ ಹಿರಿಯ ರಾಜಕಾರಿಣಿ ಎಸ್. ಕೆ. ಕಾಂತಾ ಅವರು ಮತ್ತು ಅವರ ಬೆಂಬಲಿಗರು ಬಂಧನಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ಆದ್ಯಂತವಾಗಿ ಎಲ್ಲ ಕಾರ್ಮಿಕ ಸಂಘಟಣೆಗಳು, ಎಲ್ಲ ಜನಪರ ಸಂಘ ಸಂಸ್ಥೆಗಳು, ಎಡ ಪಂಥೀಯ ವಿಚಾರವಂತರು, ಕಾರ್ಯಕರ್ತರು ಈ ಕಡೆಗೆ ಕಾಲ ವಿಳಂಬವಿಲ್ಲದೆ ದೃಷ್ಟಿ ಹರಿಸಬೇಕೆಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಕರ್ನಾಟಕದಲ್ಲಿ ಕಾರ್ಮಿಕ ಚಳುವಳಿಯ ಆರಂಭದ ಕಾಲದಲ್ಲಿಯೇ ಗುಲ್ಬರ್ಗ, ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ. ದಾರವಾಡ, ಉಡುಪಿ ಹಾಗೂ ಇತರ ಅನೇಕ ಕೇಂದ್ರಗಳಲ್ಲಿ ಪೌರ ಕಾರ್ಮಿಕರು ಕೆಂಬಾವುಟದ ಕೆಳಗೆ ಸಂಘಟಿತರಾಗಿ ಹೋರಾಟ ನಡೆಸಿ ಪಡೆದಿದ್ದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಹಾಗೂ ತಲೆಯ ಮೇಲೆ ಮಲ ಹೊರಿಸುವ ಅಮಾನುಷ ಕ್ರಮಗಳ ನಿಷೇಧವನ್ನು ಜಾರಿ ಗೊಳಿಸಿದ್ದು ನಮಗೆ ಇನ್ನೂ ಮರೆತಿಲ್ಲ. ಕರ್ನಾಟಕ ಸರಕಾರವು ಅಮಾನುಷವಾದ ಕಾರ್ಮಿಕ ವಿರೋಧಿ ಮತ್ತು ದಲಿತ ವಿರೋಧಿ ಮಾರ್ಗವನ್ನು ಕೈ ಬಿಟ್ಟು ದುಡಿಯುವವರ ಹಕ್ಕು ಭಾದ್ಯತೆಗಳನ್ನು ಕಾನೂನು ಕ್ರಮಗಳಿಂದ ಸಂರಕ್ಷಿಸಬೇಕು. ಅಂಬವ್ವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕರ್ನಾಟಕದ ಕಾರ್ಮಿಕ ಸಂಘಟಣೆಗಳು ಈ ವಿಚಾರದಲ್ಲಿ ರಾಜ್ಯವ್ಯಾಪಕ ಚಳುವಳಿಯನ್ನು ನಡೆಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ವಾರ್ತಾಭಾರತಿ ಈ ಬಗ್ಗೆ ತನ್ನ ದಿ.26.5.10 ರ ಸಂಪಾದಕೀಯದ ಮೂಲಕ  ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ತುತ್ಯರ್ಹ.

ಈ ಪ್ರಕರಣಕ್ಕೆ ಸಂಭದಿಸಿ  ಸರಕಾರ ಹೂಡಿರುವ ಎಲ್ಲ ಮೊಕ್ಕದ್ದಮೆಗಳನ್ನು ಹಿಂದೆಗೆದುಕೊಳ್ಳಬೇಕೆಂದೂ, ಬಂಧನದಲ್ಲಿರಿಸಿರುವ ಎಲ್ಲರನ್ನೂ  ಬಿಡುಗಡೆ ಮಾಡಬೇಕೆಂದೂ, ಕಾರ್ಮಿಕರಿಗೆ ಸಲ್ಲಬೇಕಾಗಿರುವ ಎಲ್ಲವನ್ನೂ ಸಲ್ಲಿಸಬೇಕೆಂದೂ ಈ ಮೂಲಕ ಒತ್ತಾಯಿಸುತ್ತೇನೆ.