ಭಾರತದ ಕಮ್ಯೂನಿಸ್ಟ್ ಪಕ್ಷಗಳು ಮತ್ತೆ ಒಗ್ಗೂಡಲಿ

ಭಾರತದ ಕಮ್ಯೂನಿಸ್ಟ್ ಪಕ್ಷಗಳ ಪುನರೇಕೀಕರಣದ ಬಗ್ಗೆ ಸೀತಾರಂ ಯೆಚೂರಿಯವರ ಹೇಳಿಕೆಗೆ ಪ್ರತಿಕ್ರಿಯೆ (ದಿನಾಂಕ ಜೂನ್ 18, 2011)

[dropcap]ಭಾ[/dropcap]ರತ ಕಮ್ಯುನಿಸ್ಟ್ ಪಕ್ಷವು 1964 ರಲ್ಲಿ ವಿಭಜಿತವಾಗಿ 47 ವರ್ಷಗಳು ಕಳೆದುವು. 1940 ರಲ್ಲಿ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದ ನಾನು ಪಕ್ಷದಲ್ಲಿ ಏಳು ದಶಕಗಳ ನಿರಂತರ ಮತ್ತು ಸಕ್ರಿಯ ಪಾತ್ರ ವಹಿಸಿದ್ದೇನೆ.  ಭಾರತೀಯ ರಾಜಕಾರಣದಲ್ಲಿ  ಕಮ್ಯುನಿಸ್ಟ್  ಪಕ್ಷವು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿದರೆ 2ನೆಯ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿತ್ತು. ಕಮ್ಯುನಿಸ್ಟ್  ಚಳುವಳಿಯು ವಿಭಜಿತವಾದ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ ಹಾಗೂ ತನ್ನ ಸ್ಥಾನ ಮಾನಗಳನ್ನೂ ಕಳೆದುಕೊಂಡಿದೆ. ಇದೀಗ ಹಿಂದೆಂದೂ ಕಾಣದ ಸೋಲನ್ನೂ ಅನುಭವಿಸಿದೆ. ಅಲ್ಲದೆ ಹಿಂದೆ ಲೆಕ್ಕಕ್ಕೇ ಇಲ್ಲ ಎಂಬ ಸ್ಥಾನದಲ್ಲಿದ್ದ ಬಲ ಪಂಥೀಯ ಕೋಮುವಾದಿ ಅರ್ ಎಸ್ ಎಸ್ ನೇತೃತ್ವದ ಭಾರತೀಯ ಜನತಾ ಪಕ್ಷವು ಇಂದು ಪ್ರಬಲವಾಗಿ ಬೆಳೆದು ದ್ವಿತಿಯ ಸ್ಥಾನಕ್ಕೆ ಏರಿ ನಿಂತಿದೆ. ಇದು ಕಮ್ಯುನಿಸ್ಟ್  ಪಕ್ಷದ ವಿಭಜನೆಯ ನೇರ ಪರಿಣಾಮ. ಈ ಒಡಕಿನ ದುರ್ಲಾಭವನ್ನು ಸಮಯ, ಸಂಧರ್ಭಸಾಧಕರು ಪಡೆದು ಸರಕಾರವು ಬಂಡವಾಳಶಾಹಿ ಧೋರಣೆಗಳನ್ನು ಹಮ್ಮಿಕೊಂಡು ತೀವ್ರಗತಿಯಲ್ಲಿ ಅವುಗಳನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಕಾಣುತ್ತೇವೆ. ಸೇವಾ ಕ್ಷೇತ್ರಗಳಾದ ರಸ್ತೆ, ಸಂಚಾರ, ವಿದ್ಯುತ್, ನೀರು ಸರಬರಾಜು, ವಿಮೆ, ಅಂಚೆ, ದೂರವಾಣಿ, ದೂರದರ್ಶನ, ಆಕಾಶವಾಣಿ, ಇತ್ಯಾದಿಗಳನ್ನು ಸಹಾ ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ಕಾಣುತ್ತೇವೆ. ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮಣೆಹಾಕಿ ಸ್ವಾಗತಿಸುತ್ತಾ, ದೇಶದ ಅಮೂಲ್ಯ ಪ್ರಾಕೃತಿಕ ಸಂಪತ್ತೆಲ್ಲಾ ಸೂರೆಗೊಂಡು ಪರದೇಶಕ್ಕೆ ಕಳ್ಳಸಾಗಣೆಯಾಗುತ್ತಿರುವುದೂ ಕಂಡುಬರುತ್ತಿದೆ. ದುಡಿಯುವ ಕಾರ್ಮಿಕರು ಹಿಂದೆ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಮಾಡಿ ಪಡೆದಿದ್ದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲಸದ ನಿಶ್ಚಿತತೆ, ಕಾಯಾಮಾತಿ ಇಲ್ಲದೆ ಗುತ್ತಿಗೆಯ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಅವರನ್ನು ಅನೇಕ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ನಮ್ಮ ದೇಶದ ಜನರಲ್ಲಿ ಶೇ 70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ಸರಕಾರದ ಕೆಟ್ಟ ಕೃಷಿ ನೀತಿಯಿಂದಾಗಿ ಅವರ ಬದುಕೇ ಚಿಂತಾಜನಕವಾಗಿದೆ. ಬೆಳೆದ ಬೇಳೆಗೆ, ದವಸ ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲದೆ, ತೆಗೆದ ಸಾಲಗಳನ್ನು ಮರುಪಾವತಿಸಲಾಗದೆ ಹೊಲ ಗದ್ದೆಗಳನ್ನು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆಗೈಯುತ್ತಿದ್ದಾರೆ. ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಬಂಡವಾಳಶಾಹಿಗಳು ವಶೀಕರಿಸಿ ದುರ್ಲಾಭ ಪಡೆಯುತ್ತಿದ್ದಾರೆ. ಶಿಕ್ಷಣವು ಖಾಸಗೀಕರಣಗೊಡು ವ್ಯಾಪಾರದ ಸರಕಾಗಿ ಬಡ ಕಾರ್ಮಿಕರ ರೈತರ ಮಕ್ಕಳಿಗೆ ಮರೀಚಿಕೆ ಯಾಗಿದೆ. ಸರಕಾರದ ಕಾರ್ಯಕ್ರಮಗಳು ಇನ್ನೂ ತೀವ್ರಗತಿಯಲ್ಲಿ ಖಾಸಗೀಕರಣದತ್ತ ಸಾಗುತ್ತಿರುವುದನ್ನು ಕಾಣುವಾಗ ಭೀತಿ ಹುಟ್ಟುತ್ತದೆ. ಆಂತೆಯೇ ಸರ್ವ ಸವಲತ್ತುಗಳನ್ನು ಸರಕಾರದಿಂದ ಪಡೆದು ಸ್ಥಾಪಿತವಾದ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಬಡವರನ್ನು ಸುಲಿಯುವ ಮತ್ತು ಬಡ ರೋಗಿಗಳನ್ನು ಪ್ರಯೋಗಾಲಯದ ಬಲಿ ಪಶು(ಗಿನಿ ಪಿಗ್) ಗಳಂತೆ ಹೊಸ ಮದ್ದುಗಳ ಮತ್ತು ಆವಿಷ್ಕಾರಗಳ ಪ್ರಯೋಗಕ್ಕೆ ಅವರನ್ನು ಬಳಸಲಾಗುತ್ತಿದ್ದರೆ, ಶ್ರೀಮಂತರಿಗೆ  ಅವು  ಐಷಾರಾಮಿ ವಿರಾಮ ಕೇಂದ್ರಗಳಾಗಿರುವುದನ್ನು ಕಾಣುತ್ತೇವೆ. ಮನೆ ಬಾಡಿಗೆ ನಿಯಂತ್ರಣಗಳಿಲ್ಲದೆ ಬಾಡಿಗೆ ವಸತಿದಾರರ ಬದುಕೇ ದುಸ್ತರವಾಗಿದೆ. ಲಂಚ, ಭ್ರಷ್ಟಾಚಾರಗಳು ಬಂಡವಾಳಿಗಳ ಶನಿ ಸಂತಾನಗಳಾಗಿ ದೇಶವನ್ನು ಕಾಡುತ್ತಿವೆ. ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ, ದುರ್ವ್ಯವಹಾರ ಮತ್ತು ವಿದೇಶೀ ಬೇಂಕುಗಳಲ್ಲಿ ಕಳ್ಳ ಕಪ್ಪು ಹಣದ ಶೇಖರಣೆಗಳು ಮುಗಿಲು ಮುಟ್ಟಿರುವ ವರದಿಗಳನ್ನು ನಾವು ಕಾಣುತ್ತೇವೆ. ಮೂಲಭೂತ ಜಾತಿವಾದಿಗಳು ದೇಶದಾದ್ಯಂತ ಭಯೋತ್ಪಾಧನೆ ಮತ್ತು ಅರಾಜಕತೆಯನ್ನು ಸೃಷ್ಟಿಸಿ ಅಧಿಕಾರವನ್ನು ಕಸಿದು ಕೊಳ್ಳುವ ಸಂಚಿನ ರಹಸ್ಯ ಬಯಲಾಗಿದ್ದನ್ನೂ ಕಾಣುತ್ತೇವೆ.

ಇಂಥಾ ದುಸ್ಥಿತಿಯಲ್ಲಿ ಎಡ ಪಕ್ಷಗಳ ಏಕೀಕರಣವನ್ನು ಒಂದು ಆಶಾಕಿರಣವಾಗಿ ಭಾರತದ ಶ್ರಮ ಜೀವಿಗಳು ಎದುರು ನೋಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯನ್ನು ಮನಗಂಡು ಕಮ್ಯುನಿಸ್ಟ್(ಮಾ) ಪಕ್ಷದ ಮುಂದಾಳು ಸೀತಾರಾಂ ಯೆಚೂರಿಯವರು ಎರಡೂ ಪಕ್ಷಗಳ ಏಕೀಕರಣಕ್ಕೆ ಕರೆಕೊಟ್ಟಿದ್ದಾರೆ. ವಿಶ್ವದ ಇತರ ರಾಷ್ಟ್ರಗಳಲ್ಲಿಯೂ ಅಂತಹ ಸಂದಿಗ್ಧ ಪರಿಸ್ಥಿಯನ್ನು ಎದುರಿಸಿ ಬಳಿಕ ಒಂದುಗೂಡಿ ಚೇತರಿಸಿರುವುದನ್ನು ನಾವು ಕಂಡಿದ್ದೇವೆ.  ಕಮ್ಯುನಿಸ್ಟ್ ಪಕ್ಷಗಳು ಒಂದುಗೂಡಿದರೆ ಎಡ ಪ್ರಜಾಪ್ರಭುತ್ವವಾದಿ ಕ್ರಾಂತಿಕಾರಿ ಪಕ್ಷಗಳ ಪುನರೇಕೀಕರಣದ ಸಂಭವದ ಧ್ವನಿಯೂ ಉನ್ನತ ಮಟ್ಟದಲ್ಲಿ ಕೇಳಿಬರುತ್ತಿದೆ. ಅಂತಿರುವಾಗ ಇದು  ಖಂಡಿತವಾಗಿಯೂ ಒಂದು ಉತ್ತಮ ಸಲಹೆ ಹಾಗೂ ಸಂಧರ್ಬೋಚಿತವೂ ಅಗಿದೆ. ಅಂತೆಯೇ ನಾವೂ ಅದನ್ನು ಸ್ವಾಗತಿಸುತ್ತೇವೆ. ಸುಮಾರು 5 ದಶಕಗಳ ಕಾಲ ಬೇರೆ ಬೇರೆಯಾಗಿದ್ದ ಪಕ್ಷಗಳೆರಡು ಕೇವಲ ನಾಯಕರ ತೀರ್ಮಾನದಿಂದ ಮಾತ್ರವೇ ಒಂದಾಗಿಬಿಡುತ್ತವೆ ಎಂಬ ಭ್ರಮೆ ನಮಗಿಲ್ಲ. ಪ್ರತ್ಯ ಪ್ರತ್ಯೇಕ ವಾಗಿ ಬೆಳೆದ ಸಂಘಟನೆಗಳು ತಮ್ಮದೇ ಆದ ನಡವಳಿಕೆಗಳನ್ನು ಹೊಂದಿರುವುದು ಸಹಜ. ಆದುದರಿಂದ ಎರಡೂ ಪಕ್ಷಗಳು ಮುಂದಿನ ಮಹಾ ಅಧಿವೇಶನಗಳ ಸಿದ್ಧತೆ ಮಾಡುವ ಸಂದರ್ಭಗಳಲ್ಲಿ ಪಕ್ಷಗಳ ಪ್ರತೀಯೊಂದು ಘಟಕಗಳಲ್ಲಿ ಸಹಾ ಈ ಬಗ್ಗೆ ಗಂಭೀರವಾದ ಚರ್ಚೆ ನಡೆದು ಅಭಿಪ್ರಾಯ ಮತ್ತು ಸಮನ್ವಯತೆಯನ್ನು ಸಾಧಿಸಿ ಮುಂದಿನ ಮಹಾ ಅಧಿವೇಶನಗಳಲ್ಲಿ ಏಕಾಭಿಪ್ರಾಯಕ್ಕೆ ಬರುವ ಮೂಲಕ ಈ ಏಕೀಕರಣದ ಪ್ರಕ್ರಿಯೆಯು ಸಾರ್ವತ್ರಿಕವಾಗಿ ನಡೆಯಬೇಕೆಂದು ನಾವು ಹಾರೈಸುತ್ತೇವೆ. ಹಿಂದಿನ ಕಹಿ ಅನುಭವಗಳನ್ನು ತೊಡೆದು ಹಾಕಿ ಪುನರೇಕೀಕರಣ ಪ್ರಕ್ರಿಯೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಎಲ್ಲಾ ಹಂತಗಳಲ್ಲಿಯೂ ಭಾಗಿಗಳಾಗ ಬೇಕೆಂದು ನಮ್ಮ ಅಪೇಕ್ಷೆ. ಈ ಹಿಂದೆಯೇ ನಮ್ಮ ಪಕ್ಷದ ನಾಯಕರು ಅನೇಕ ಬಾರಿ ಏಕೀಕರಣದ ಕರೆಯನ್ನು ಕೊಟ್ಟಿದ್ದರೂ ಅದು ಕಾರ್ಯಗತವಾಗಿರಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆರಂಭದಲ್ಲಿ ಪ್ರದಾನ ಕಾರ್ಯದರ್ಶಿಯಾಗಿದ್ದ ರಾಜೇಶ್ವರ ರಾಯರು, ಬಳಿಕ ಇಂದ್ರಜಿತ್ ಗುಪ್ತ, ಆ ಬಳಿಕ ಎ ಬಿ ಬರ್ಧನ್‌ರವರು ಪಕ್ಷಗಳ ಏಕೀಕರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ಮಾಡಿರುವುದನ್ನು ನೆನಪಿಸುತ್ತೇನೆ. ಅಲ್ಲದೆ ಪಕ್ಷದ ಪ್ರತಿಯೊಂದು ಮಹಾ ಅಧಿವೇಶನಗಳಲ್ಲಿಯೂ ಸಹಾ ಎರಡೂ ಪಕ್ಷಗಳ ಐಕ್ಯತೆಗೆ ಕರೆ ನೀಡುತ್ತಾ ಐಕ್ಯವು ಭಾರತೀಯ ರಾಜಕೀಯದಲ್ಲಿ  ಹೊಸ ತಿರುವನ್ನು ಉಂಟು ಮಾಡಲು ಆರಂಭದ ಹೆಜ್ಜೆಯಾಗಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ. ಆದರೆ ಕಮ್ಯುನಿಸ್ಟ್(ಮಾ) ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದೇ ಇದ್ದುದರಿಂದ ಏಕೀಕರಣದ ಕಾರ್ಯವು ದೂರದ ಕನಸಾಗಿಯೇ ಉಳಿದಿತ್ತು. ಈಗಲಾದರೂ ಕಮ್ಯುನಿಸ್ಟ್ ಪಕ್ಷಗಳ ಸೋಲಿನ ಅನುಭವದಿಂದ ಏಕೀಕರಣದ ಕರೆಯ ಧ್ವನಿಯು ಆ ಪಕ್ಷದ ನಾಯಕ ಸೀತಾರಾಂ ಯೆಚೂರಿಯವರಿಂದಲೇ ಮೊಳಗಿದ್ದನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ದೂರದರ್ಶನದಲ್ಲಿ ಪ್ರಸಾರಗೊಂಡ ಅವರ ಹೇಳಿಕೆಯಲ್ಲಿ ವಿಲೀನದ ಅಗತ್ಯವನ್ನು ಬಹಳ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ ಮತ್ತು ಅದು ಉನ್ನತ ಮಟ್ಟದಲ್ಲಿ ಮಾತ್ರ ಆದರೆ ಸಾಲದು, ಅದು ಪಕ್ಷಗಳ ಎಲ್ಲ ಹಂತ ಗಳಲ್ಲಿಯೂ ನಡೆಯ ಬೇಕೆಂಬ ಅವರ ಸಲಹೆಯು ಅತ್ಯುತ್ತಮವಾಗಿದೆ. ಆದರೆ ಇದರ ಬಗ್ಗೆ  ಕೆಲವು ನಾಯಕರು ಕಹಿ ಪ್ರತಿಕ್ರಿಯೆ ನೀಡಿರುವುದು ಒಡಕು ದನಿಗಳ ಸಂಕೇತವಾಗಿದೆ. ಇದು ಪಕ್ಷಗಳೊಳಗಿನ ಚರ್ಚೆಯಿಂದ ಸಮನ್ವಯಗೊಂಡು ಪರಿಹಾರವಾಗುವುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಕಾಲದ ಅವಶ್ಯಕತೆಯಾಗಿದೆ.

ಎರಡೂ ಪಕ್ಷಗಳ ಮಹಾ ಅಧಿವೇಶನಗಳು ಮುಂದಿನ ತಿಂಗಳುಗಳಲ್ಲಿ ನಡೆಯಲಿವೆ. ಕಮ್ಯುನಿಸ್ಟ್ ಪಕ್ಷಗಳ ಕ್ರಮದಂತೆ ಮಹಾ ಅಧಿವೇಶನಗಳ ಮೊದಲು ಪಕ್ಷಗಳ ರಾಜ್ಯ, ಜಿಲ್ಲೆ, ಹಾಗೂ ಕೆಳ ಮಟ್ಟದ ಎಲ್ಲಾ ಘಟಕಗಳಲ್ಲಿ ಅಧಿವೇಶನದ ಮುಂದೆ ಬರಲಿರುವ ಮುಖ್ಯ ನಿರ್ಣಯಗಳನ್ನು ಚರ್ಚಿಸಿ ಅಭಿಪ್ರ್ರಾಯ ವನ್ನು ಕ್ರೋಢೀಕರಿಸಿ ಕೆಳಗಿನಿಂದ ಮೇಲಿನ ಹಂತದ ಏಕಾಭಿಪ್ರಾಯವನ್ನು ಮೂಡಿಸುವಂತಾಗಬೇಕು. ಕಮ್ಯುನಿಸ್ಟ್ ಚಳುವಳಿಯಲ್ಲಿ ಏಳು ದಶಕಗಳ ಸಕ್ರಿಯ ಅನುಭವವುಳ್ಳ ನಾನಂತೂ ಈ ಬಗ್ಗೆ ಬಹಳ ಆಶಾ ಭಾವನೆ ತಳೆದಿದ್ದೇನೆ. ಇದು ಕೇವಲ ನನ್ನ ಆಶೆ ಮಾತ್ರವಲ್ಲ, ನಮ್ಮ ಪಕ್ಷದ, ಅದರ ನೇತೃತ್ವದಲ್ಲಿರುವ ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ಇತರ ಎಲ್ಲಾ ಸಾಮೂಹಿಕ ಸಂಘಟನೆಗಳ ಹಾಗೂ ಪಕ್ಷದ ಬಗ್ಗೆ ಸದಭಿಪ್ರಾಯವುಳ್ಳ  ಮತ್ತು ಪಕ್ಷವನ್ನು ಬೆಂಬಲಿಸುವ ಎಡ ಅಭಿಪ್ರಾಯವುಳ್ಳ ಬುದ್ಧಿ ಜೀವಿಗಳು ಸಹಾ ಇದೇ ಅಭಿಪ್ರಾಯವನ್ನು ತಳೆದಿದ್ದಾರೆ ಎಂದು ತಿಳಿದಿದ್ದೇನೆ. ಅಂತೂ ಯೆಚೂರಿಯವರ ಏಕೀಕರಣದ ಕರೆಯು ಕಾರ್ಯ ರೂಪಕ್ಕೆ ಬರಲಿ ಮತ್ತು ಕಮ್ಯುನಿಸ್ಟ್  ಪಾರ್ಟಿಯು ತನ್ನ ಹಿಂದಿನ ವರ್ಚಸ್ಸನ್ನು ಪಡೆದು ದೇಶದ ಆಡಳಿತವೇ ಎಡ ಪ್ರಜಾಪ್ರಭುತ್ವವಾದಿ ದಿಸೆಯಲ್ಲಿ ರೂಪುಗೊಳ್ಳಲಿ ಎಂದು ಒಬ್ಬ ಹಿರಿಯ  ಕಮ್ಯುನಿಸ್ಟ್ ಕಾರ್ಯಕರ್ತನಾಗಿ ನಾನು ನಿವೇದಿಸಿಕೊಳ್ಳುತ್ತೇನೆ ಮತ್ತು ಇದು ನನ್ನ ಜೀವಿತಾವಧಿಯಲ್ಲೇ ಜರಗಲಿ ಎಂದು ನನ್ನ ಜೀವಿತದ ಕೊನೆಯ ಹಂತದಲ್ಲಿರುವ ನಾನು ಹಾರೈಸುತ್ತೇನೆ.