ಭಗವದ್ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಸ್ತಾಪದ ಕುರಿತು ಒಂದು ಅವಲೋಕನ

[dropcap]ಭ[/dropcap]ಗವದ್ಗೀತೆಯು ಒಂದು ಉತ್ತಮ ಸಾಹಿತ್ಯಿಕ ಕೃತಿ ಎನ್ನುವುದು ನಿಜ ಮತ್ತು ಅದು ಯಾರನ್ನಾದರೂ ಮನ ಮೆಚ್ಚಿಸುವ ಸಾಮರ್ಥ್ಯವಿರುವ ಒಂದು ಸುಂದರ ಕವನ ಗುಚ್ಛವಾಗಿದೆ. ಆದರೆ ಅದರಲ್ಲಿ ಪರಸ್ಪರ ವೈರುಧ್ಯದ ಹಲವು ಆಶಯಗಳು ಮತ್ತು ಉಪದೇಶಗಳು ಅಡಕವಾಗಿವೆ.  ಈ ಗೀತೆಯು ಒಂದು ಧರ್ಮದ ಸಲುವಾಗಿ ನಡೆದ ಧರ್ಮಯುದ್ಧದ ಭಾಗವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವುದಕ್ಕೆ ಆರಂಭದಿಂದಲೇ ತಂತ್ರಗಳು ನಡೆದಿದ್ದುದನ್ನು ನಾವು ಕಾಣಬಹುದು. ಇದರಲ್ಲಿ ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸುವ ಕೃಷ್ಣನು ಬೋಧಿಸುವ ಧರ್ಮ ಯುದ್ಧವು ಅಧರ್ಮದ ವಿರುದ್ಧದ ಯುದ್ದ ಅಲ್ಲ, ಬದಲಿಗೆ ವರ್ಗ ಸಂಘರ್ಷಗಳನ್ನು ವರ್ಣ ಸಂಘರ್ಷಗಳನ್ನಾಗಿ ಚಿತ್ರಿಸಿ ಅದನ್ನು ತೊಡೆದು ಹಾಕುವುದು ಧರ್ಮವೆಂದು ಬೋಧಿಸುವುದು ಮತ್ತು ಒಂದು ವ್ಯವಸ್ಥೆಯನ್ನು ದೃಢಗೊಳಿಸುವ ತಂತ್ರವು ಅದರಲ್ಲಿ ಒಳಗೊಂಡಿರುವುದು ಎನ್ನುವುದನ್ನು  ವಿವೇಚನಾಶೀಲರು ಅರ್ಥೈಸಬಲ್ಲರು.

ತನ್ನ ರಥವು ಯುದ್ಧ ಭೂಮಿಯ ಮದ್ಯೆ ನಿಂತಿರಲು ಅರ್ಜುನನು, ತನ್ನ ಬಾಂಧವರನ್ನು, ಗುರು ಹಿರಿಯರನ್ನು, ಅಣ್ಣ ತಮ್ಮಂದಿರನ್ನು, ಸ್ವಜಾತಿಬಾಂಧವರನ್ನು ಕೊಂದು ರಾಜ್ಯವನ್ನು ಗೆಲ್ಲುವ ಯುದ್ದಕ್ಕೆ ಹೊರಟಿದ್ದೇವೆ, ಈ ಕೆಲಸ ನನ್ನಿಂದಾಗದು ಎನ್ನಲು ಕೃಷ್ಣನು ಅರ್ಜುನನನ್ನು ಯುದ್ದಕ್ಕೆ ಹುರಿದುಂಬಿಸುತ್ತಾನೆ ಮತ್ತು ಅದು ಅವನ ಕರ್ತವ್ಯವೆಂದು ತಿಳಿಸುತ್ತಾ ಅನೇಕ ಧರ್ಮ, ಅಧರ್ಮಗಳ ಬೋಧನೆಗಳನ್ನು ಮಾಡುತ್ತಾನೆ. ಅವುಗಳ ಕೆಲವು ಸಾಲುಗಳು ಇಂತಿವೆ:

ಅಥ ಚೇತ್ತ್ವಮಿಮಂ ದರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತ: ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||

ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮೀ ಯುಗೇ ಯುಗೇ ||

ಶ್ರೇಯಾನ್ ಸ್ವಧರ್ಮೋ ವಿಗುಣ್: ಪರಧರ್ಮಾತ್ಸ್ವ್ನುಷ್ಠ್ತಾತಾತ್|
ಸ್ವಧರ್ಮೇ ನಿಧನಂ ಶ್ರೇಯ: ಪರಧರ್ಮೋ ಭಯಾವಹ: ||

ಕರ್ಮಣೈಯವ ಅಧಿಕಾರಸ್ಠೇ ಮಾಫಲೇಷು ಕದಾಚನ:
ಮಾ ಕರ್ಮ ಫಲ ಹೇತುರ್‘ಭು ಮಾತೇ ಸಂಗೋಪ ಕರ್ಮಣಿ ||

ಸರ್ವಧರ್ಮಾನ್ ಪರಿತ್ಯಜ ಮಾಮೇಕಂ ಶರಣಂವೃಜಾ
ಅಹಂ ತವ ಸರ್ವಪಾಪೇಬ್ಸೇ ಮೋಕ್ಷ‘ಇಷ್ಯಾಮಿ ಮಾಶುಜಾ ||

ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವುದಿದು:

ಒಂದು ವೇಳೆ ನೀನು ಈ ಧರ್ಮಯುದ್ಧವನ್ನು ಮಾಡದೇ ಹೋದರೆ ನೀನು ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀ.

ಚಾತುರ್ವರ್ಣ್ಯವೆಂಬ ವರ್ಗಗಳನ್ನು ಸೃಷ್ಠಿಸಿದವನು ನಾನು. ಗುಣ ಕರ್ಮಗಳನ್ನು ನೋಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳಾಗಿ ಈ ಮನುಷ್ಯ ಕುಲವನ್ನು ವಿಂಗಡಿಸಿದವನು ನಾನು ಮತ್ತು ಅದರ ಒಂದು ವಿಭಾಗಕ್ಕೆ ಸೇರಿದವನು ನೀನು ಮತ್ತು ಯುದ್ಧವನ್ನು ಮಾಡುವುದು ನಿನ್ನ ಧರ್ಮ ಅಲ್ಲದೆ ಈಗ ಯುದ್ಧ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಮತ್ತು ಯಾವಾಗಲೆಲ್ಲ [ಚಾತುರ್ವರ್ಣ್ಯ] ಧರ್ಮಕ್ಕೆ ಹಾನಿ ಉಂಟಾಗಿ ಅಧರ್ಮವು ಮೇಲೇಳುವುದೋ ಆವಾಗಲೆಲ್ಲಾ ಅದಕ್ಕೆ ಬಲಿಯಾದವರನ್ನೆಲ್ಲಾ ರಕ್ಷಿಸಲಿಕ್ಕೆ ಮತ್ತು ದುಷ್ಕರ್ಮಿಗಳನ್ನು ನಾಶಗೊಳಿಸಲಿಕ್ಕೆ ನಾನು ಕಾಲ ಕಾಲಕ್ಕೆ ಹುಟ್ಟಿ ಬರುತ್ತೇನೆ ಎನ್ನುತ್ತಾನೆ.

ಅಂದರೆ ಶ್ರೀ ಕೃಷ್ಣನೇ ಸೃಷ್ಠಿಸಿದ ಚಾತುರ್ವರ್ಣ್ಯಗಳಲ್ಲಿರುವ ಅಸಮಾನತೆ ಮತ್ತು ಬೇಧಗಳನ್ನು ವಿರೋಧಿಸಿ ಸಮಾನತೆ,  ಸೌಹಾರ್ಧತೆಗಾಗಿ ಸಂಘರ್ಷಿಸುತ್ತಿರುವ ದಲಿತರು, ಹಿಂದುಳಿದವರು, ಅಹಿಂದುಗಳು ಮತ್ತಿತರರನ್ನು ನಾಶಗೊಳಿಸಲಿಕ್ಕೆ ಈಗ ಮತ್ತೆ ಹುಟ್ಟಿಬರಲು ಕಾಲ ಸನ್ನಿಹಿತವಾಗಿದೆ. ಮಹಾಭಾರತ ಯುದ್ಧ ನಡೆದದ್ದೇ ಚಾತುರ್ವರ್ಣ್ಯಗಳ ಧರ್ಮ ಆಧಾರಿತ ಸಮಾಜ ವ್ಯವಸ್ಥೆಯನ್ನು ಸಂರಕ್ಷಿಸುವುದಕ್ಕೇ ಎಂದು ಭಗವದ್ಗೀತೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು.

ಎಲೇ ಅರ್ಜುನ ಎಲ್ಲಾ ಧರ್ಮಗಳನ್ನೂ ನಂಬಿಕೆಗಳನ್ನೂ, ಕರ್ತವ್ಯಗಳನ್ನೂ ಮರೆತು ನನಗೆ ಶರಣಾಗತನಾಗಿ ನಾನು ಬೋಧಿಸಿದಂತೆ ಮಾಡು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ, ಅಧರ್ಮ ವರ್ತನೆಗಳಿಂದಲೂ ವಿಮುಕ್ತಿಗೊಳಿಸುತ್ತೇನೆ ಎನ್ನುತ್ತಾ ಆತನನ್ನು ಕೇವಲ ತನ್ನ  ಆಜ್ಞಾನಿಷ್ಠನನ್ನಾಗಿಸಿಕೊಳ್ಳುತ್ತಾನೆ.

ಪರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಗುಣವಿಲ್ಲದ ತನ್ನ ಧರ್ಮವೇ ಶ್ರೇಷ್ಠ ಮತ್ತು ಅದರಲ್ಲಿಯೇ ಸಾಯುವುದೂ ಶ್ರೇಯಸ್ಕರ ಎಂಬ ಉಲ್ಲೇಖಗಳನ್ನು ಮತಾಂತರ ವಿರೋಧಿಗಳು, ಸಂಘಪರಿವಾರದವರು ಮನನ ಮಾಡಿಕೊಂಡರೆ ನಡೆಯುತ್ತಿರುವ ದೊಂಬಿ, ಘರ್ಷಣೆಗಳು ತಕ್ಕ ಮಟ್ಟಿಗಾದರೂ ಕಡಿಮೆಯಾಗಬಹುದು.

ಮಾತಿನ ಮೋಡಿಯಿಂದ ಕೃಷ್ಣನು ಮೂಢ ನಂಬಿಕೆಯನ್ನೇ ಅರ್ಜುನನಲ್ಲಿ ಸೃಷ್ಠಿಸುತ್ತಾನೆ. ಒಟ್ಟಿನಲ್ಲಿ ಭಗವತ್ ಗೀತೆಯು ಮೂಢರ ಅಂಧ ವಿಶ್ವಾಸಕ್ಕೆ ಮಾತ್ರ ಸೀಮಿತವಾಗಿದ್ದು,  ಕುರುಡು ನಂಬಿಕೆಯವರಿಗೆ ಮಾತಿನ ಮೋಡಿಯ ಬಲೆ ಬೀಸುತ್ತದೆ ಎನ್ನುವುದು ಕೃಷ್ಣನು ನೀಡುವ ನಾನಾ ತರದ ವಿವರಣೆಗಳಿಂದ ಸ್ಪಷ್ಟವಾಗುತ್ತದೆ  ಅಲ್ಲದೆ ವಿಚಾರವಂತರಿಗೆ ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಬೇರೊಬ್ಬರು ಆಜ್ಞಾಪಿಸುವ ಕಾರ್ಯವನ್ನು ಜಾರಿ ಮಾಡುವ ಅರ್ಹತೆ ಮಾತ್ರವೇ  ಅವನಿಗಿದ್ದು ಅದಕ್ಕೆ ಫಲವನ್ನು ಅಪೇಕ್ಷಿಸುವ ಅಧಿಕಾರವೂ ಇಲ್ಲ ಎನ್ನುವುದರಲ್ಲಿ ಅಡಗಿದೆ ಗುಲಾಮಗಿರಿಯ ಪರಕಾಷ್ಟೆ.

ಭಗವತ್ ಗೀತೆಯು ರಾಷ್ಟೀಯ ಸ್ವಾತಂತ್ರ ಸಂಗ್ರಾಮದ ರಾಷ್ಟ್ರೀಯ ಐಕ್ಯತೆಯ ಸ್ಪೂರ್ತಿಯ ಸೆಲೆಯಾಗಿ ರಾಷ್ಟ್ರೀಯ ನಾಯಕರು ಅದನ್ನು ಬಳಸಿಕೊಂಡಿದ್ದಾರೆ ಎಂಬ ಗೀತಾ ಸಮರ್ಥಕರ ವಾದವು ಸತ್ಯಕ್ಕೆ ದೂರವಾದುದು ಮತ್ತು ಅಂತಹವರು ರಾಷ್ಟೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿದ್ದ ಕುವೆಂಪು, ರವಿಂದ್ರನಾಥ್ ಠಾಗೂರ್ ಮತ್ತಿತರ ಪ್ರಗತಿಪರರ ಕೃತಿಗಳನ್ನು ಮನನ ಮಾಡದಿರುವುದು ವಿಷಾದನೀಯ.

ಲೋಕಮಾನ್ಯ ತಿಲಕರ ಗೀತಾ ರಹಸ್ಯವೆಂಬ ಉತ್ಕೃಷ್ಟ ಕೃತಿಯು ಗೀತೆಯ ಭೋಧನೆಗಿಂತ ಭಿನ್ನವಾದ ರಾಷ್ಟ್ರೀಯ ಪರಿಕಲ್ಪನೆಯದ್ದಾಗಿದೆ. ಮಹತ್ಮಾಗಾಂಧಿಯವರು ಸ್ವಾತಂತ್ರ್ಯ ಮತ್ತು ಸಮಾನತೆಯ ಹಾಗೂ ಪ್ರತ್ಯೇಕವಾಗಿ ಚಾತುರ್ವಣ್ಯದ ಅಸ್ಪೃಶ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು.  ಇಂದು  ನಮ್ಮ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ  ಸಾರ್ವಜನಿಕ ಭಾವೈಕ್ಯ ಸಾಧನೆ ಮುಖ್ಯವೇ ಹೊರತು ಭಗವತ್ ಗೀತೆಯನ್ನು ಭೋಧಿಸುವಂಥಾ ಪ್ರತ್ಯೇಕತಾವಾದವು ಅಪಾಯಕಾರಿಯಾಗಿದೆ. ಭಗವತ್ ಗೀತೆ ಮಾತ್ರವಲ್ಲ ಇತರ ಎಲ್ಲ ಧರ್ಮ ಗ್ರಂಥಗಳು ಸಹಾ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಬೆಳವಣಿಗೆಗೆ ಸಲ್ಲದ ಅಂಶಗಳನ್ನೊಳಗೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಬೇಕಾಗುತ್ತದೆ.

ಒಟ್ಟಿನಲ್ಲಿ ಇದು ಸ್ವಾತಂತ್ರ್ಯ ಅಪಹರಣದ, ವರ್ಣಭೇಧ, ಜಾತಿಭೇಧ, ಇತ್ಯಾದಿಗಳನ್ನು ಪ್ರತಿಪಾದಿಸುವ ಭಾಷೆಯನ್ನುಳ್ಳ, ಸಾಹಿತ್ಯದ ಮೆರಗನ್ನು ನೀಡಲ್ಪಟ್ತಿರುವ ವಿಷ ಲೇಪಿತ ಮಾತ್ರೆಯಾಗಿದೆ. ಇಂತಹ ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಯತ್ನವನ್ನು ದೇಶಪ್ರೇಮಿಗಳು, ಸಮಾನತೆ ಸೌಹಾರ್ದತೆ ಬಯಸುವ ಎಲ್ಲರೂ ವಿರೋಧಿಸಬೇಕು. ನಮ್ಮದು ಜನತಾಂತ್ರಿಕ ಜಾತ್ಯಾತೀತ ಆಡಳಿತೆಯ  ಸಂವಿಧಾನಬದ್ಧ ಪ್ರಭುತ್ವವುಳ್ಳ ದೇಶವಾಗಿದ್ದು, ನಮ್ಮ ಸಂವಿಧಾನದ ಪರಿಪಾಲನೆಯನ್ನು ಅನುಲ್ಲಂಘನೀಯ ನಿಯಮವನ್ನಾಗಿ ಅಂಗೀಕರಿಸಿದೆ. ಇಲ್ಲಿ ರಾಷ್ಟ್ರೀಯ ಐಕ್ಯತೆ ಉಳಿಯಬೇಕಾದರೆ ಧರ್ಮ ಬೋಧನೆ, ಧರ್ಮಾಚರಣೆಗಳನ್ನು ಸಾರ್ವಜನಿಕ ಜೀವನದಿಂದ ಮುಕ್ತಗೊಳಿಸಬೇಕಾಗಿದೆ ಮತ್ತು ವಿದ್ಯಾಲಯಗಳು, ಆರೋಗ್ಯ ಮತ್ತಿತರ ಸಾರ್ವಜನಿಕ ಸೇವಾ ಸಂಸ್ಥೆಗಳು ಎಲ್ಲವೂ ಸಂವಿಧಾನ ಬದ್ಧವಾಗಿ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಲೇಬೇಕಾಗಿದೆ.

ವಾರ್ತಾಭಾರತಿ